ಬೆಂಗಳೂರು: ನಗರದ ಹಡ್ಸನ್ ವೃತ್ತದ ಬಳಿಯಿರುವ ಹಾಪ್ಕಾಮ್ಸ್ ಮಾರಾಟ ಮಳಿಗೆಯಲ್ಲಿ ಆಯೋಜನೆಗೊಂಡಿರುವ ‘ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ-2024’ಕ್ಕೆ ಸೋಮವಾರ ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದ್ದಾರೆ.
ಬಳಿಕ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಪ್ರಸಕ್ತ ವರ್ಷದ ಮೇಳದಲ್ಲಿ 500 ಮೆಟ್ರಿಕ್ ಟನ್ ದ್ರಾಕ್ಷಿ ಹಾಗೂ 900 ಮೆಟ್ರಿಕ್ ಟನ್ ಕಲ್ಲಂಗಡಿ ಹಣ್ಣು ಮಾರಾಟದ ಗುರಿ ಹೊಂದಿದ್ದೇವೆ ಎಂದರು.
ಮೇಳದಲ್ಲಿ ದ್ರಾಕ್ಷಿ ಹಾಗೂ ಕಲ್ಲಂಗಡಿ ಹಣ್ಣಿನ ವಿವಿಧ ತಳಿಗಳ ಪ್ರದರ್ಶನ ಏರ್ಪಡಿಸಲಾಗಿದೆ. ಗ್ರಾಹಕರು ಫೆ.29ರವರೆಗೆ ಹಾಪ್ ಕಾಮ್ಸ್ನಲ್ಲಿ ಶೇ.10ರಷ್ಟು ರಿಯಾಯಿತಿ ದರದಲ್ಲಿ ದ್ರಾ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಖರೀದಿಸಬಹುದಾಗಿದೆ.
ಈ ಬಾರಿಯ ಮೇಳದಲ್ಲಿ ಬೆಂಗಳೂರು ನೀಲಿ, ಥಾಮಸನ್ ಸೀಡ್ಲೆಸ್, ಕೃಷ್ಣ ಶರದ್, ಸೋನಾಕಾ ಸೇರಿದಂತೆ 11 ವಿವಿಧ ಜಾತಿಯ ದ್ರಾಕ್ಷಿ ಹಾಗೂ ಕಲ್ಲಂಗಡಿ ನಾಮದಾರಿ, ಹಳದಿ ತಿರುಳಿನ ಕಲ್ಲಂಗಡಿ, ಕಿರಣ್ ವಿಶೇಷ ಜಾತಿಯ ಕಲ್ಲಂಗಡಿ ಹಣ್ಣು ಆಕರ್ಷಣೆ ಪಡೆದುಕೊಂಡಿದೆ.
ರಾಜ್ಯದಲ್ಲಿ ಒಟ್ಟು 36,117 ಹೆಕ್ಟರ್ ಪ್ರದೇಶದಲ್ಲಿ ವಿವಿಧ ತಳಿಯ ದ್ರಾಕ್ಷಿಗಳನ್ನು ಬೆಳೆಯಲಾಗುತ್ತಿದೆ. ಈ ಪೈಕಿ 31,086 ಹೆಕ್ಟರ್ ಪ್ರದೇಶದಲ್ಲಿ ಬೀಜ ರಹಿತ ದ್ರಾಕ್ಷಿ ಬೆಳೆಯಲಾಗುತ್ತಿದೆ. ರಾಜ್ಯದ ಒಟ್ಟು ದ್ರಾಕ್ಷಿ ಉತ್ಪನ್ನ 7,74,993 ಮೆಟ್ರಿಕ್ ಟನ್ಗಳಾಗಿದ್ದು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ.
ಕಲ್ಲಂಗಡಿ ಬೆಳೆಯನ್ನು ರಾಜ್ಯದ 4,700 ಹೆಕ್ಟೆರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಒಟ್ಟು ಉತ್ಪನ್ನ 1,92,973 ಮೆಟ್ರಿಕ್ ಟನ್ಗಳಾಗಿರುತ್ತದೆ. ತುಮಕೂರು, ಚಿತ್ರದುರ್ಗ, ಕೋಲಾರ, ಚಾಮರಾಜನಗರ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ ಎಂದು ಹಾಪ್ಕಾಮ್ಸ್ ಸಂಸ್ಥೆ ತಿಳಿಸಿದೆ.
ದ್ರಾಕ್ಷಿ, ಕಲ್ಲಂಗಡಿ ಸೇವನೆಯಿಂದ ಲಾಭ
ದ್ರಾಕ್ಷಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ‘ಸಿ’ ಮತ್ತು ‘ಕೆ’ ಜೀವಸತ್ವಗಳು, ರಂಜಕ, ಕ್ಯಾಲ್ಸಿಯಂ, ಕಬ್ಬಿಣ ಮುಂತಾದ ಅಂಶಗಳು ಲಭ್ಯವಿವೆ. ಕಲ್ಲಂಗಡಿಯಲ್ಲಿ ‘ಸಿ’ ಮತ್ತು ‘ಎ’ ಜೀವಸತ್ವಗಳು ಹೆಚ್ಚು ದೊರೆಯುತ್ತವೆ. ಇದು ಹೃದಯದ ಆರೋಗ್ಯ ಹೆಚ್ಚಿಸುವಲ್ಲಿ ನೆರವಾಗುತ್ತದೆ. ಕಲ್ಲಂಗಡಿ ಹಣ್ಣು ಸೇವನೆಯಿಂದ ದೇಹದಲ್ಲಿ ನೀರಿನಾಂಶ ಹೆಚ್ಚಿಸಲು ಹಾಗೂ ಚರ್ಮದ ಆರೋಗ್ಯ ಕಾಪಾಡಲು ಸಾಧ್ಯವಿದೆ.
ರೈತರಿಂದ ನೇರವಾಗಿ ಗ್ರಾಹಕರಿಗೆ
ಹಾಪ್ ಕಾಮ್ಸ್ ಸಂಸ್ಥೆಯು ಕಳೆದ ಆರು ದಶಕಗಳಿಂದ ಬೆಂಗಳೂರಿನ ಗ್ರಾಹಕರಿಗೆ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡುತ್ತಿದೆ. ಸಂಸ್ಥೆಯು ಆಯಾ ಋತುಮಾನಗಳಲ್ಲಿ ಲಭ್ಯವಾಗುವ ಹಣ್ಣು ಮತ್ತು ತರಕಾರಿಗಳಿಗೆ ಹಾಗೂ ಹಬ್ಬದ ಸಂದರ್ಭಗಳಲ್ಲಿ ವಿಶೇಷ ಮೇಳಗಳನ್ನು ಆಯೋಜಿಸುವ ಮೂಲಕ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯನ್ನು ಒದಗಿಸುವಲ್ಲಿ ನೆರವಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚು ನೆರವಾಗುತ್ತಿದೆ.