ಮಂಡ್ಯ: ದಕ್ಷಿಣ ಬದರೀಕಾಶ್ರಮ ಖ್ಯಾತಿಯ ಮೇಲುಕೋಟೆಯಲ್ಲಿ ಗುರುವಾರ ರಾತ್ರಿ ಲಕ್ಷಾಂತರ ಭಕ್ತರ ಜಯಘೋಷದ ನಡುವೆ ಚೆಲುವನಾರಾಯಣಸ್ವಾಮಿಯ ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಜಿಲ್ಲಾಡಳಿತದ ನೇತೃತ್ವದಲ್ಲಿ ವೈಭವಯುತವಾಗಿ ಜರುಗಿತು.
ಪಂಚನಾರಾಯಣರು ಪ್ರತಿಷ್ಠಾಪಿತವಾಗಿರುವ ಪುಣ್ಯಕ್ಷೇತ್ರ, ಭೂವೈಕುಂಠ, ಯಧುಗಿರಿ ಎಂದೇ ಪ್ರಸಿದ್ಧಿಯಾದ ಐತಿಹಾಸಿಕ, ಧಾರ್ಮಿಕ ಕ್ಷೇತ್ರ ಮೇಲುಕೋಟೆಯ ವೈರಮುಡಿ ಉತ್ಸವವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಯಿಂದ ಜನಸಾಗರವೇ ಹರಿದುಬಂದಿತು. ವೈರಮುಡಿ ಕಿರೀಟಧಾರನಾದ ಚೆಲುವರಾಯಸ್ವಾಮಿಯ ಉತ್ಸವ ದೇವಸ್ಥಾನದಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಭಕ್ತರು ‘ಗೋವಿಂದಾ… ಗೋವಿಂದಾ…’ ಎಂದು ಕೂಗುತ್ತ ಭಕ್ತಿಯ ಪರಾಕಾಷ್ಠೆ ಮೆರೆದರು. ವಜ್ರಖಚಿತ ವೈರಮುಡಿ ಧರಿಸಿ ಕಂಗೊಳಿಸುತ್ತಿದ್ದ ದೇವರ ಆಕರ್ಷಕ ಚೆಲುವನ್ನು ಕಣ್ತುಂಬಿಕೊಂಡರು.
ಬೆಳಗ್ಗೆ 7.50ಕ್ಕೆ ಮಂಡ್ಯದ ಜಿಲ್ಲಾ ಖಜಾನೆಯಿಂದ ಹೊರಟ ವೈರಮುಡಿ ವಿವಿಧ ಗ್ರಾಮಗಳ ಮೂಲಕ ಸಂಜೆ 6ಕ್ಕೆ ಮೇಲುಕೋಟೆ ಪ್ರವೇಶಿಸಿತು. ಈ ಮಧ್ಯೆ ಮಾರ್ಗದುದ್ದಕ್ಕೂ ಸಿಗುವ ಹಲವು ಹಳ್ಳಿಗಳಲ್ಲಿ ಗ್ರಾಮಸ್ಥರು ವೈರಮುಡಿಗೆ ಪೂಜೆ ನೆರವೇರಿಸಿದರು. ಮೇಲುಕೋಟೆಯ ಪ್ರವೇಶದ್ವಾರದ ವೀರಾಂಜನೇಯಸ್ವಾಮಿ ಸನ್ನಿಧಿಯ ಪಾರ್ವಟೆ ಮಂಟಪದಿಂದ ತಿರುವಾಭರಣಗಳ ಪೆಟ್ಟಿಗೆಗಳಿಗೆ(ವೈರಮುಡಿ, ರಾಜಮುಡಿ, ಇತರ ವಜ್ರಾಭರಣಗಳ ಎರಡು ಗಂಟುಗಳು) ಬಂಗಾರದ ಪಲ್ಲಕ್ಕಿಯಲ್ಲಿಟ್ಟುಕೊಂಡು ಚತುರ್ವಿದಿಗಳಲ್ಲಿ ಮೆರವಣಿಗೆ ಮೂಲಕ 6.30ಕ್ಕೆ ಗಂಟೆಗೆ ದೇವಾಲಯಕ್ಕೆ ತರಲಾಯಿತು. ಇದಕ್ಕೂ ಮುನ್ನ ದೇಗುಲದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕಲಾಯಿತು.
ಬಳಿಕ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ನೇತೃತ್ವದಲ್ಲಿ ಆಭರಣಗಳ ಗಂಟುಗಳನ್ನು ಬಿಚ್ಚಿ ವೈರಮುಡಿ ಹಾಗೂ ಇತರ ಆಭರಣಗಳ ಪರಿಶೀಲನೆ(ಪರ್ಕಾವಣೆ) ನಡೆಸಲಾಯಿತು. ವೈರಮುಡಿ, ರಾಜಮುಡಿ ಸೇರಿದಂತೆ ಶಂಖ, ಚಕ್ರ, ಗದಾಂಗಿ ಪದ್ಮಪೀಠ, ಶಿರಚಕ್ರ, ಅಭಯಹಸ್ತ, ಕರ್ಣಾಭರಣ, ಗಂಡಭೇರುಂಡ ಪದಕಗಳನ್ನು ಒಳಗೊಂಡ ವಿವಿಧ ಮಾದರಿಯ 16 ಆಭರಣಗಳನ್ನು ಪರಿಶೀಲಿಸಲಾಯಿತು. ಬಳಿಕ ಅಲ್ಲಿ ಹಾಜರಿದ್ದ ಎಲ್ಲ ಅಧಿಕಾರಿಗಳು, ಸ್ಥಾನಿಕರು, ಪ್ರಮುಖ ಅರ್ಚಕರಿಂದ ಸಹಿ ಸಂಗ್ರಹಿಸಿದ ನಂತರ ವೈರಮುಡಿ ಸಹಿತ ಎಲ್ಲ ಆಭರಣಗಳನ್ನು ದೇವಾಲಯದ ಸ್ಥಾನಿಕರಿಗೆ ಹಸ್ತಾಂತರಿಸಲಾಯಿತು.
ಚೆಲುವನಾರಾಯಣಸ್ವಾಮಿಗೆ ವೈರಮುಡಿ ಕಿರೀಟ, ಆಭರಣಗಳನ್ನು ಧರಿಸಲಾಯಿತು. ರಾತ್ರಿ 7.37ಕ್ಕೆ ದೇವಾಲಯದ ಸುತ್ತ 3 ಬಾರಿ ಗರುಡೋತ್ಸವದ ಪ್ರದಕ್ಷಿಣೆ ನಡೆಯಿತು. ಉತ್ಸವಕ್ಕೆ ನಿರ್ದಿಷ್ಟ ಮುಹೂರ್ತವೇ ಇಲ್ಲದಿರುವುದು ವೈರಮುಡಿಯ ವಿಶೇಷತೆ. ಮಹಾಮಂಗಳಾರತಿ ಮಾಡಿದ ಸಮಯವೇ ಮುಹೂರ್ತ. ಹೀಗಾಗಿ ರಾತ್ರಿ 8.05ಕ್ಕೆ ಮಂಗಳವಾದ್ಯಗಳ ಸದ್ದಿನೊಂದಿಗೆ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಉತ್ಸವವು ದೇಗುಲದಿಂದ ಹೊರಗೆ ಬಂದಾಗ ವೈರಮುಡಿ ಧರಿಸಿದ್ದ ಸ್ವಾಮಿಯ ದರ್ಶನ ಭಾಗ್ಯ ದೊರೆಯುತ್ತಿದ್ದಂತೆ ನೆರೆದಿದ್ದ ಭಕ್ತರು ಭಕ್ತಿಪರವಶರಾದರು. ಗಂಡಭೇರುಂಡ ಸ್ವರೂಪಿಯಾದ ಚಂದ್ರಪ್ರಭೆ ಪ್ರಭಾವಳಿಯ ನಡುವೆ ಶ್ರೀದೇವಿ, ಭೂದೇವಿಯರ ಮಧ್ಯೆ ಗರುಡರೂಢನಾದ ಶ್ರೀ ಚೆಲುವರಾಯಸ್ವಾಮಿಯ ಉತ್ಸವಮೂರ್ತಿ ವೈರಮುಡಿ ಧರಿಸಿ ಕಂಗೊಳಿಸುತ್ತಿತ್ತು. ಇದನ್ನು ನೋಡಿದ ಭಕ್ತರು ಸ್ವಾಮಿಗೆ ಜಯಘೋಷ ಮೊಳಗಿಸುತ್ತ ಭಕ್ತಿರಸದಲ್ಲಿ ಮಿಂದೆದ್ದು, ಭಕ್ತಿಯ ಪರಾಕಾಷ್ಠೆ ಮೆರೆದರು. ರಾಜಮುಡಿ ಧರಿಸಿ ಉತ್ಸವ ನೆರವೇರಿಸಿದ ನಂತರ ವೈರಮುಡಿ ಉತ್ಸವ ಜರುಗಿತು.
ದೇವಾಲಯದ ಮುಖ್ಯದ್ವಾರದ ಬಳಿಯೇ 30 ನಿಮಿಷಗಳ ಕಾಲ ಉತ್ಸವ ನಡೆಸಲಾಯಿತು. ಬಳಿಕ ದೇವಾಲಯ ಸುತ್ತ ಹಾಗೂ ಪ್ರಮುಖ ರಾಜಬೀದಿಗಳಲ್ಲಿ ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ಉತ್ಸವ ಸಂಚರಿಸಿತು. ನಂತರ ಸ್ವಾಮಿಗೆ ಮೈಸೂರಿನ ರಾಜ ಒಡೆಯರ್ ನೀಡಿರುವ ವಜ್ರಖಚಿತ ರಾಜಮುಡಿಯನ್ನು ಧರಿಸಿ ಉತ್ಸವ ಮಾಡಲಾಯಿತು.
ಆಕರ್ಷಕ ವಿದ್ಯುತ್ದೀಪಗಳು
ವೈರಮುಡಿ ಉತ್ಸವದ ಅಂಗವಾಗಿ ಮೇಲುಕೋಟೆಯಲ್ಲಿ ವೈವಿಧ್ಯಮಯ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು. ಕಣ್ಣು ಕೊರೈಸುತ್ತಿದ್ದ ವಿದ್ಯುತ್ದೀಪಗಳ ಬೆಳಕಿನ ಚಿತ್ತಾರ ಭಕ್ತ ಸಮೂಹವನ್ನು ಆಕರ್ಷಿಸಿದವು. ಉತ್ಸವ ಹಿನ್ನೆಲೆಯಲ್ಲಿ ಮೇಲುಕೋಟೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.