ಬಾಳೆಹೊನ್ನೂರು: ಕುವೆಂಪು ರಚಿಸಿದ ಬಾರಿಸು ಕನ್ನಡ ಡಿಂಡಿಮವ ಗೀತೆಯಲ್ಲಿರುವ ಅಂಶದ ಆಧಾರದ ಮೇಲೆ ಕನ್ನಡಿಗರೆಲ್ಲರೂ ಒಂದಾಗಿ ಬಾಳಬೇಕು ಎಂದು ಎಸ್ಜೆಆರ್ ಕಾಲೇಜು ಪ್ರಾಚಾರ್ಯ ಕೆ.ಆರ್.ಬೂದೇಶ್ ಹೇಳಿದರು.
ಪಟ್ಟಣದ ಎಸ್ಜೆಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಕನ್ನಡನಾಡು ಹಲವು ಪ್ರವಾಸಿ ತಾಣಗಳ ಬೀಡು. ಅವುಗಳನ್ನು ಪ್ರತಿಯೊಬ್ಬರೂ ನೋಡಿ ಆನಂದಿಸಬೇಕಿದೆ. ಕನ್ನಡದ ಏಳಿಗೆಗೆ ಪ್ರತಿಯೊಬ್ಬರೂ ಹೋರಾಡಬೇಕಿದೆ. ಕನ್ನಡ ಮಾತನಾಡುವ ಜನರಲ್ಲಿ ವೈವಿಧ್ಯತೆಯಿದ್ದರೂ ನಾವೆಲ್ಲರೂ ಒಟ್ಟಿಗೆ ಬಾಳುತ್ತಿರುವುದು ಕನ್ನಡ ನಾಡಿನ ಹೆಮ್ಮೆ ಎಂದರು.
ಪ್ರಾಧ್ಯಾಪಕಿ ಭಾರತಿ ಮಾತನಾಡಿ, ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ. ಕನ್ನಡ ಅಸ್ಮಿತೆಯ ಶ್ರೇಯಸ್ಸಿಗೆ ಶ್ರಮಿಸಿದ ಹಲವು ಕವಿಗಳು ಹಾಗೂ ಕನ್ನಡಪರ ಹೋರಾಟಗಾರರ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದರು.
ಮೈಸೂರು ರಾಜ್ಯವಾಗಿದ್ದ ಈ ನಾಡು ಕರ್ನಾಟಕ ರಾಜ್ಯ ಎಂಬ ಹೆಸರನ್ನು ಪಡೆದ ಇತಿಹಾಸ ಅರಿತುಕೊಳ್ಳಬೇಕು. ಕನ್ನಡ ಭಾಷೆೆ ಮತ್ತು ಸಂಸ್ಕೃತಿಯ ಉಳಿವಿಗೆ ಸರ್ಕಾರದ ನೀತಿಗಳು ಹಾಗೂ ಪ್ರತಿಯೊಬ್ಬ ಕನ್ನಡಿಗರ ಮನಸ್ಥಿತಿ ಮುಖ್ಯ ಎಂದು ಹೇಳಿದರು.
ಪ್ರಾಧ್ಯಾಪಕ ಪ್ರಶಾಂತ್ ಕುಮಾರ್, ಶಿಕ್ಷಕರಾದ ಎನ್.ಆರ್.ನಟರಾಜ್ ನಾಯಕ್, ಬಿ.ಎಸ್.ಲತಾ, ಉಮಾಶಂಕರ್, ಜ್ಯೋತಿ ಇತರರಿದ್ದರು.