ಮಂಗಳೂರು: ವಿಶ್ವದಲ್ಲಿ ಅತೀ ದೊಡ್ಡ ಸಾರ್ವತ್ರಿಕ ಚುನಾವಣೆ ಆದ ಭಾರತ ದೇಶದ ಲೋಕ ಚುನಾವಣೆಯ ಪರ್ವದಲ್ಲಿ ಪ್ರತಿಯೊಬ್ಬ ನಾಗರಿಕರು ಗರ್ವದಿಂದ ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಸುದೃಢಗೊಳಿಸಲು ಪ್ರಯತ್ನಿಸಬೇಕು ಎಂದು ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯ ಡಾ. ದೇವದಾಸ ರೈ ಹೇಳಿದರು.
ವುಡ್ಲ್ಯಾಂಡ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಹಾಗೂ ಇನ್ನರ್ವೀಲ್ ಕ್ಲಬ್ ಮಂಗಳೂರು ನಾರ್ತ್ ಸಂಸ್ಥೆಗಳ ಆಶ್ರಯದಲ್ಲಿ ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ಸಯೋಗದೊಂದಿಗೆ ಆಯೋಜಿಸಿದ ಮತದಾನದ ಮಾಹಿತಿ, ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮತದಾನ ದೇಶದ ಸಂವಿಧಾನ ನಾಗರಿಕರಿಗೆ ನೀಡಿದ ಹಕ್ಕು ಅದನ್ನು ಕಡ್ಡಾಯವಾಗಿ ಸ್ವಯಂಪ್ರೇರಿತರಾಗಿ ಯಾವುದೇ ಅಮಿಷಕ್ಕೆ ಒಳಪಡದೆ ನಿರ್ಭಿತಿಯಿಂದ ನಮ್ಮ ಕರ್ತವ್ಯವೆಂದು ಪರಿಗಣಿಸಿ ತಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕು ಎಂದರು.
ಜಿಲ್ಲಾ ವಯಸ್ಕರ ಶಿಕ್ಷಣಾ ಇಲಾಖೆಯ ಅಧಿಕಾರಿ ಲೋಕೇಶ್ ಮತದಾನದ ಪ್ರತಿಜ್ಞಾ ವಿಧಿ ವಿಧಾನ ನೇರವೇರಿಸಿದರು. ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ನ ಪ್ರಾಂಶುಪಾಲ ಮಾಲಿನಿ ಹೆಬ್ಬಾರ್, ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಗೀತಾ ರೈ, ದ.ಕ. ಜಿಲ್ಲಾ ಸ್ವೀಪ್ ಪ್ರಚಾರ ಸಮಿತಿಯ ಸದಸ್ಯೆ ಮೇರಿ ಫೆಡ್ರಿಕ್ ಡಾಯಸ್ ಸೇರಿದಂತೆ ಹಲವರು ಇದ್ದರು.
ರೋಟರಿ ಕ್ಲಬ್ ಮಂಗಳೂರು ಸಂಸ್ಥೆಯ ಅಧ್ಯಕ್ಷ ರಾಜೇಶ್ ಶೆಟ್ಟಿ ಸ್ವಾಗತಿಸಿದರು. ರೋಟರ್ಯಾಕ್ಟ್ ಮಂಗಳೂರು ಸಿಟಿಯ ಅಧ್ಯಕ್ಷ ಅರ್ಜುನ್ ಪ್ರಕಾಶ್ ವಂದಿಸಿದರು.