ವಾರಾಣಸಿ: ನಿಯಮಿತ ಲಗೇಜ್ಗಿಂತ ಹೆಚ್ಚು ಲಗೇಜ್ ಹೊಂದಿದ್ದ ಕಾರಣ ಏರ್ ಇಂಡಿಯಾದ ಸಿಬ್ಬಂದಿ ಮಾರಿಷಸ್ ದೇಶದ ಅಧ್ಯಕ್ಷರಿಗೇ ವಿಮಾನವನ್ನು ಹತ್ತುವುದಕ್ಕೆ ಅನುಮತಿ ನೀಡಿಲ್ಲ. ವಾರಾಣಸಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಲಗೇಜ್ಗೆ ಶುಲ್ಕ ಪಾವತಿಸಿದ ನಂತರವೇ ವಿಮಾನ ಹತ್ತುವಂತೆ ಪೃಥ್ವಿರಾಜ್ಸಿಂಗ್ ರೂಪನ್ ಅವರನ್ನು ತಡೆಹಿಡಿಯಲಾಗಿದೆ.
ಮಾರಿಷಸ್ ದೇಶದ ಅಧ್ಯಕ್ಷರಾಗಿರುವ ಪೃಥ್ವಿರಾಜ್ಸಿಂಗ್ ಅವರು ಆರು ಜನರ ನಿಯೋಗದೊಂದಿಗೆ ವಾರಾಣಸಿಗೆ ಎರಡು ದಿನಗಳ ಪ್ರವಾಸಕ್ಕೆ ಬಂದಿದ್ದರು. ವಾರಾಣಸಿಯಿಂದ ದೆಹಲಿಗೆ ಹೊರಟ ಅವರನ್ನು ಏರ್ ಇಂಡಿಯಾ ಸಿಬ್ಬಂದಿಗಳು ತಡೆದಿದ್ದಾರೆ. ಅವರ ಬಳಿ ಹೆಚ್ಚಿನ ಲಗೇಜ್ ಇದ್ದ ಕಾರಣ ಅದಕ್ಕೆ ಶುಲ್ಕ ಪಾವತಿಸಿದ ನಂತರವೇ ಅವರಿಗೆ ವಿಮಾನ ಹತ್ತಲು ಅನುಮತಿ ನೀಡುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ವಿಮಾನ ನಿಲ್ದಾಣದ ನಿರ್ದೇಶಕ ಆಕಾಶ್ದೀಪ್ ಮಥೂರ್ ಸ್ಥಳಕ್ಕೆ ಬಂದಿದ್ದು, ಅತಿಥಿಗಳಿಗೆ ವಿಮಾನದಲ್ಲಿ ತೆರಳಲು ಅವಕಾಶ ಮಾಡಿಕೊಡುವಂತೆ ಸಿಬ್ಬಂದಿಗೆ ತಿಳಿಸಿದ್ದಾರೆ. ಹಾಗಿದ್ದರೂ ಸಿಬ್ಬಂದಿ ನಿಯಮ ಪಾಲನೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಏವಿಯೇಷನ್ ಸಚಿವ ಮತ್ತು ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ಸಿಬ್ಬಂದಿಯ ಬಳಿ ಅತಿಥಿಗಳಿಗೆ ಹೆಚ್ಚಿನ ಶುಲ್ಕ ವಿಧಿಸದಿರುವಂತೆ ಹೇಳಿದ ನಂತರವೇ ಅತಿಥಿ ನಿಯೋಗಕ್ಕೆ ವಿಮಾನ ಹತ್ತಲು ಅನುಮತಿ ನೀಡಲಾಗಿದೆ. (ಏಜೆನ್ಸೀಸ್)