ಮಸ್ಕಿ: ಇಲ್ಲಿನ ಹಳ್ಳದಲ್ಲಿ ಭಾನುವಾರ ಕೊಚ್ಚಿಕೊಂಡು ಹೋದ ಚನ್ನಬಸವನ ಶೋಧ ಕಾರ್ಯ ಮಂಗಳವಾರವೂ ಮುಂದುವರಿದಿದೆ. ತಾಲೂಕು ಆಡಳಿತ ಮೂರು ತೆಪ್ಪಗಳನ್ನು ಬಳಸಿ ಶೋಧ ನಡೆಸುತ್ತಿದ್ದು, ಮಂಗಳವಾರ ಸಂಜೆಯಾದರೂ ಸುಳಿವು ಸಿಕ್ಕಿಲ್ಲ. ಮಸ್ಕಿ ನಾಲಾ ಜಲಾಶಯದ ಮೇಲ್ಬಾಗದಲ್ಲಿ ನಿರಂತರವಾಗಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಮತ್ತು ಜಲಾಶಯದಿಂದ 1700 ಕ್ಯೂಸೆಕ್ ನೀರು ಹಳ್ಳಕ್ಕೆ ಬಿಟ್ಟಿರುವುದರಿಂದ ಹುಡುಕಾಟದ ಕೆಲಸಕ್ಕೆ ಅಡ್ಡಿಯಾಗುತ್ತಿದೆ.
ಹಳ್ಳದ ತುಂಬಾ ಜಾಲಿ ಬೆಳೆದಿದ್ದು, ಅಲ್ಲಲ್ಲಿ ಕಲ್ಲು ಬಂಡೆಗಳಿರುವುದರಿಂದ ತೆಪ್ಪಕ್ಕೆ ಕಲ್ಲು-ಮುಳ್ಳುಗಳು ತಾಕಿ, ಪತ್ತೆ ಕಾರ್ಯದ ವೇಗ ತಗ್ಗುತ್ತಿದೆ. ಸ್ಥಳದಲ್ಲಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಸಿಪಿಐ ದೀಪಕ್ ಬೂಸರಡ್ಡಿ, ಪಿಎಸ್ಐ ಸಣ್ಣ ವೀರೇಶ ಬೀಡು ಬಿಟ್ಟಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚಾರಣೆ ನಡೆಸಿದ್ದಾರೆ.