ಮಸ್ಕಿ : ನೂತನ ತಾಲೂಕು ಕೇಂದ್ರವಾಗಿ 2 ವರ್ಷ ಗತಿಸಿದರೂ ಪೂರ್ಣ ಪ್ರಮಾಣದ ಕಚೇರಿಗಳನ್ನು ಪ್ರಾರಂಭಿಸದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸರ್ಕಾರ ಇನ್ನೂ 15 ದಿನದೊಳಗಾಗಿ ಮಸ್ಕಿ ತಾಲೂಕಿಗೆ ಬೇಕಾದ ವಿವಿಧ ಕಚೇರಿ ಹಾಗೂ ಸಿಬ್ಬಂದಿ ನೇಮಿಸಬೇಕು ಎಂದು ಮುಖಂಡ ಅಶೋಕ ಮುರಾರಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಗತಿಪರ ಸಂಘಟನೆ ಮುಖಂಡರೊಂದಿಗೆ ಸುದ್ದಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಅನೂಕೂಲವಾಗಲೆಂದು ಹೊಸ ತಾಲೂಕು ರಚನೆ ಮಾಡಿದೆ. ಆದರೆ, ಅಗತ್ಯ ಸೌಲಭ್ಯಗಳನ್ನು ಒದಗಿಸದೆ ಇದ್ದರಿಂದ ಜನಸಾಮಾನ್ಯರು ಕಾಗದ ಪತ್ರಗಳಿಗಾಗಿ ಅಲೆದಾಡುವಂತಾಗಿದೆ ಎಂದರು.
ಸಿಂಧನೂರು, ಮಾನ್ವಿ ಹಾಗೂ ಲಿಂಗಸುಗೂರು ತಾಲೂಕಿನ ಹಳ್ಳಿಗಳನ್ನು ಸೇರಿಸಿ ಮಸ್ಕಿ ತಾಲೂಕು ರಚಿಸಲಾಗಿದೆ. ಆಯಾ ಹಳ್ಳಿಗಳ ಜನರು ಶಿಕ್ಷಣ, ಕೃಷಿ ಸೇರಿ ಮುಂತಾದ ದಾಖಲೆಗಳಿಗಾಗಿ ಅನಿವಾರ್ಯವಾಗಿ ಹಳೇ ತಾಲೂಕಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಜಿಲ್ಲಾಡಳಿತ ಶೀಘ್ರವಾಗಿ ತಾಲೂಕಿನ ಸಮಸ್ಯೆ ಸರಿಪಡಿಸಲು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಸ್ಕಿ ತಾಲೂಕು ಬಂದ್ ಮಾಡಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೆ.ಆರ್.ಎಸ್ ಸಂಘಟನೆ ತಾಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ ಮಾತನಾಡಿ, ತಾಲೂಕಿಗೆ ಬೇಕಾದ ಅಗತ್ಯ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಸಾರ್ವಜನಿಕರು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಹೋರಾಟ ಆಯೊಜಿಸಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ದುರ್ಗರಾಜ್ ವಟಗಲ್, ಸಿದ್ದಪ್ಪ ಹೂವಿನಬಾವಿ, ಸಿದ್ದುಮುರಾರಿ, ಅನೀಲ್ಕುಮಾರ, ತಾಯಪ್ಪ, ವಿಜಯಕುಮಾರ್ ಬಡಿಗೇರ್, ವಸಂತಕುಮಾರ್ ಇದ್ದರು.