ಬೆಂಗಳೂರು: ಲೋಕಸಭೆ ಚುನಾವಣೆ ಸಿದ್ಧತೆ, ಅಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಕೈಹಾಕಿರುವ ಈ ಸಂದರ್ಭದಲ್ಲಿ ಜೆಡಿಎಸ್ ಸವಾಲುಗಳ ಮೇಲೆ ಸವಾಲು ಎದುರಿಸುವ ಸ್ಥಿತಿಗೆ ಬಂದು ತಲುಪಿದೆ.
ರಾಜ್ಯ ರಾಜಕೀಯ ವಿದ್ಯಮಾನ, ಲೋಕಸಭೆ ಚುನಾವಣೆ, ಪಕ್ಷ ಸಂಘಟನೆ ದೃಷ್ಟಿಯಿಂದಲಂತೂ ಸಾಲು ಸಾಲು ಸವಾಲುಗಳು ಜೆಡಿಎಸ್ ಮುಂದಿವೆ.
ಒಂದು ಕಡೆ ಆಪರೇಷನ್ ಹಸ್ತಕ್ಕೆ ಬಲಿಯಾಗದಂತೆ ಶಾಸಕರ ಮನವೊಲಿಕೆಯ ಸವಾಲಿದ್ದರೆ, ಇನ್ನೊಂದು ಕಡೆ ಪ್ರಜ್ವಲ್ ರೇವಣ್ಣ ಅನರ್ಹತೆ ಕುರಿತು ಕಾನೂನು ಹೋರಾಟ ಮಾಡುವ ಸಂದಿಗ್ಧ ಸ್ಥಿತಿಗೆ ಜೆಡಿಎಸ್ ಸಿಲುಕಿದೆ.
ಮತ್ತೊಂದೆಡೆ ದೇವೇಗೌಡರ ವಯೋ ಸಹಜ ಆರೋಗ್ಯ ಸಮಸ್ಯೆ, ಅನಾರೋಗ್ಯದ ನಿಮಿತ್ತ ಕುಮಾರಸ್ವಾಮಿ ವಿಶ್ರಾಂತಿ ಇವೆಲ್ಲ ಜೆಡಿಎಸ್ ರಾಜಕೀಯ ಚಟುವಟಿಕೆಗಳಿಗೆ ದೊಡ್ಡ ಅಡ್ಡಿಯಾಗಿವೆ.
ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಜೆಡಿಎಸ್ ಶಾಸಕರು ಹಾಗೂ ಕಾರ್ಯತರ್ಕರನ್ನು ಹಿಡಿದಿಟ್ಟುಕೊಳ್ಳಲು ನಾನಾ ಕಾರ್ಯಕ್ರಮ ಕೈಗೆತ್ತಿಕೊಂಡಿತ್ತು. ಮಾಜಿ ಸಚಿವ ಜಿ.ಟಿ.ದೇವೇಗೌಡರನ್ನು ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ಮಾಡಿ ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡಲು ವೇದಿಕೆ ರೂಪಿಸಲಾಗಿತ್ತು. ಜತೆಗೆ ಕಾವೇರಿ ನೀರಿನ ಹೋರಾಟ ತೀವ್ರಗೊಳ್ಳುತ್ತಿದೆ.
ಎದ್ದುಕಾಣುತ್ತಿದೆ ಕುಮಾರಸ್ವಾಮಿ ಗೈರು
ಹಳೇ ಮೈಸೂರು ಭಾಗದ ಜನರು ರಾಜ್ಯ ಸರ್ಕಾರದ ವಿರುದ್ಧ ಸೆಟೆದು ನಿಂತಿದ್ದಾರೆ. ಈ ಸಂದರ್ಭದಲ್ಲಿ ಆ ಭಾಗದ ಜನರಿಗೆ ಬೆನ್ನೆಲುಬಾಗಿ ಜೆಡಿಎಸ್ ನಿಲ್ಲಬೇಕಿತ್ತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕಾವೇರಿ ಹೋರಾಟಕ್ಕೆ ಸಾಥ್ ನೀಡಿದ್ದರೂ ಈ ಹೋರಾಟದಲ್ಲಿ ಕುಮಾರಸ್ವಾಮಿ ಗೈರು ಎದ್ದು ಕಾಣುತ್ತಿದೆ.
ಅಪರೇಷನ್ ಹಸ್ತದ ಮೂಲಕ ಜೆಡಿಎಸ್ ಶಾಸಕರು ಹಾಗೂ ನಾಯಕರನ್ನು ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ ಮುಂದುವರಿಸಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತರ ತಂಡವೊಂದು ಅಂಡರ್ ಗ್ರೌಂಡ್ ಕೆಲಸ ಮಾಡುತ್ತಿದೆ. ಇದು ಜೆಡಿಎಸ್ಗೆ ಸಂಕಷ್ಟ ತಂದೊಡ್ಡಿದೆ.
ಕಾನೂನು ಹೋರಾಟದ ಕಡೆಗೆ ಲಕ್ಷ್ಯ
ಪ್ರಜ್ವಲ್ ರೇವಣ್ಣ ಅನರ್ಹತೆ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಜೆಡಿಎಸ್ ಕಾನೂನು ಸಮರ ಸಾರಬೇಕಿದೆ. ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ. ಇದು ಕೂಡ ಪಕ್ಷ ಸಂಘಟನೆಯತ್ತ ವರಿಷ್ಠರು ಗಂಭೀರವಾಗಿ ತೊಡಗಿಕೊಳ್ಳಲು ತೊಡರುಗಾಲಾಗಿದೆ.