ಕನಕಗಿರಿ; ಆಧುನಿಕ ಜೀವನ ಶೈಲಿ ಹಾಗೂ ಕ್ರಿಯಾತ್ಮಕ ಕಲಿಕೆಯ ದಿನಗಳಲ್ಲಿ ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಹಿಮಾಲಯನ್ ಯೋಗ ಗುರು ನಿರಂಜನಸ್ವಾಮಿ ಹೇಳಿದರು.
ಇದನ್ನೂ ಓದಿ: ಖಾಸಗಿ ಶಿಕ್ಷಣ ಸಂಸ್ಥೆ ನಡೆಸುವುದು ಸವಾಲಿನ ಕೆಲಸ
ಪಟ್ಟಣದ ರುದ್ರಮುನಿ ಪ್ರೌಢಶಾಲೆ ಹಾಗೂ ಚನ್ನಶ್ರೀರುದ್ರ ಪಿಯು ಕಾಲೇಜಿನಲ್ಲಿ ಶ್ರೀರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದಿಂದ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಮನುಷ್ಯನಿಗೆ ಶಿಕ್ಷಣದಷ್ಟೇ ಸಂಸ್ಕಾರವೂ ಅಗತ್ಯ. ಹಿಂದೆ ಇದ್ದ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಪ್ರತಿ ಹಂತದಲ್ಲಿಯೂ ಸಂಸ್ಕಾರವಿತ್ತು. ಆದರೆ, ಈಗ ಕಣ್ಮರೆಯಾಗಿದ್ದು, ಗುರು ಹಿರಿಯರ ಬಳಿ, ತಂದೆ ತಾಯಿ, ಕುಟುಂಬಸ್ಥರರೊಂದಿಗೆ, ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದು ತಿಳಿದಿಲ್ಲ. ಅದಕ್ಕಾಗಿ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಸಂಸ್ಕಾರ ಕೊಡಬೇಕು ಎಂದರು.
ವಿದ್ಯಾರ್ಥಿ ಸಮೂಹ ಜ್ಞಾನ ಗುರುವಾಗಿಸಿಕೊಳ್ಳಬೇಕೇ ಹೊರತು ಯಾವುದೇ ವ್ಯಕ್ತಿಯನ್ನಲ್ಲ. ಪರಿಸರ ಸಂರಕ್ಷಣೆ, ಸ್ವಚ್ಛತೆ, ಸಂಸ್ಕೃತಿ, ಪರಂಪರೆ ಜತೆ ಸಾಮಾನ್ಯ ಜ್ಞಾನ ಅರಿಯಬೇಕು. ದಿನ ನಿತ್ಯ ಪ್ರತಿಯೊಬ್ಬರು ಯೋಗ, ಧ್ಯಾನ ರೂಢಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಸದೃಢವಾಗಿಸಿಕೊಳ್ಳಬೇಕೆಂದು ತಿಳಿಸಿದರು.
ಶ್ರೀ ಗುರುರುದ್ರಸ್ವಾಮಿ ಉಚಿತ ಪ್ರಸಾದ ನಿಲಯ ಕಾರ್ಯದರ್ಶಿ ವಾಗೀಶ ಹಿರೇಮಠ ಮಾತನಾಡಿ, ಹಿಮಾಲಯದಲ್ಲಿ 6 ವರ್ಷಗಳ ಕಾಲ ಯೋಗ ಸಾಧನೆಗೈದ ನಿರಂಜಶ್ರೀಗಳು ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಹಲವು ಕಡೆಗಳಲ್ಲಿ ಯೋಗ ತರಬೇತಿ ನೀಡಿದ್ದು, ತರಬೇತಿ ಜತೆಗೆ ಸಾಮೂಹಿಕ ಭಜನೆ ಕಾರ್ಯಕ್ರಮ ನಡೆಸಲು ಮುಂದಾಗತ್ತಿದ್ದು, ಎಲ್ಲೆಡೆ ವ್ಯಾಪಕ ಸ್ಪಂದನೆ ದೊರೆಯುತ್ತಿದೆ ಎಂದರು.
ಪ್ರಮುಖರಾದ ಬಸವರಾಜ ಗುಗ್ಗಳಶೆಟ್ರ, ಪ್ರಶಾಂತ ಪ್ರಭುಶೆಟ್ಟರ, ಶಿಕ್ಷಕರಾದ ರಮೇಶ ಎಲಿಗಾರ, ಶಿವಾರೆಡ್ಡಿ ಮಣ್ಣೂರು, ಬಸವರಾಜ ಬಿ, ಹನುಮೇಶ, ಶಶಿಕಲಾ ಹಟ್ಟಿ, ಮಂಗಳಾ ಸಜ್ಜನ, ರವಿಕುಮಾರ ಮೋಹಿತೆ ಇತರರಿದ್ದರು.