ಚಿಕ್ಕಮಗಳೂರು: ಬಿಂಡಿಗ ಮಲ್ಲೇನಹಳ್ಳಿ ದೇವಿರಮ್ಮ ದೇವಸ್ಥಾನದಲ್ಲಿ ನ.12ರಿಂದ 15ರವರೆಗೆ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
ನ.12ರಂದು ಬೆಳಗ್ಗೆ ಶ್ರೀ ದೇವೀರಮ್ಮನ ಬೆಟ್ಟದಲ್ಲಿ ಅಭಿಷೇಕ ನಂತರ ಪೂಜೆ ಪ್ರಾರಂಭವಾಗಲಿದೆ. ರಾತ್ರಿ 7ಗಂಟೆಗೆ ದೀಪೋತ್ಸವ ನಡೆಯಲಿವೆ. ನ.13ರಂದು ಬೆಳಗ್ಗೆ 10 ಗಂಟೆಗೆ ಶ್ರೀದೇವೀರಮ್ಮ ದೇವಸ್ಥಾನದಲ್ಲಿ ಶ್ರೀದೇವಿಗೆ ಉಡುಗೆ, ಪೂಜೆ, ಸಂಜೆ ಬೆಣ್ಣೆಬಟ್ಟೆ ಸುಡುವುದು, ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.
14 ರಂದು ರಾತ್ರಿ ಶ್ರೀದೇವಿ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹ, ಅಗ್ನಿಕುಂಡ ಪೂಜೆ, ಕಳಸ ಸ್ಥಾಪನೆ, ಕುಂಕುಮಾರ್ಚನೆ ಇತ್ಯಾದಿ ಪೂಜೆ ನಡೆಯಲಿವೆ. 15 ರಂದು ಸೂರ್ಯೋದಯಕ್ಕೆ ಕೆಂಡರ್ಚಾನೆ ನಂತರ ಮಹಾಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ದೇವೀರಮ್ಮ ಬೆಟ್ಟದ ಮೇಲೆ ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ. ಇದೇ ದಿನ ದೇವೀರಮ್ಮನವರ ದೇವಸ್ಥಾನದಲ್ಲಿ ಹಣ್ಣು ಕಾಯಿ ಮಾಡಿಸಬಹುದು. ಭಕ್ತರು ಬರಿ ಕಾಲಿನಲ್ಲಿ ಬೆಟ್ಟ ಹತ್ತಬೇಕು. ದೇವಿ ದರ್ಶನವಾದ ತಕ್ಷಣ ಬೆಟ್ಟದಿಂದ ಇಳಿಯಬೇಕು. ಬೆಟ್ಟದಲ್ಲಿ ಹಾಗೂ ದೇವಸ್ಥಾನದ ಸುತ್ತಮುತ್ತ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು ಎಂದು ತಹಸೀಲ್ದಾರ್ ಸೂಚನೆ ನೀಡಿದ್ದಾರೆ.
ತರೀಕೆರೆ, ಬೀರೂರು, ಕಡೂರು, ಚಿಕ್ಕಮಗಳೂರಿನಿಂದ ದೇವೀರಮ್ಮ ಬೆಟ್ಟಕ್ಕೆ ಕೆಎಸ್ಆರ್ಟಿಸಿ ಬಸ್ನ ವ್ಯವಸ್ಥೆ ಮಾಡಲಾಗಿದೆ. ಅನ್ನ ದಾಸೋಹ ಮಾಡಿಸುವವರು ದೇವಸ್ಥಾನದ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಬಹುದು. ಬೆಟ್ಟದ ಮೇಲೆ ಪಟಾಕಿ ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.