ಹಟ್ಟಿಚಿನ್ನದಗಣಿ: ಉತ್ತರಾಯಣದ ಪರ್ವಕಾಲವಾದ ಮಕರ ಸಂಕ್ರಾಂತಿ ನಿಮಿತ್ತ ಪಟ್ಟಣದ ನಾನಾಕಡೆ ಮುತ್ತೈದೆಯರು ಭೋಗಿ ವಿತರಿಸಿದರು. ರೈತರು ತಾವು ಬೆಳೆದ ಕಬ್ಬು, ಕಡಲೆ, ಹಣ್ಣು, ಎಳ್ಳು-ಬೆಲ್ಲ, ಹತ್ತಿ, ಎಣ್ಣೆ, ತುಪ್ಪ, ಬೆಣ್ಣೆ ಸೇರಿ ವಿವಿಧ ಖಾದ್ಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಕೃಷ್ಣಾ ನದಿ ತೀರಗಳಾದ ಟಣಮನಕಲ್, ಗುಂಡಲಬಂಡೆ ಜಲಪಾತ ಮತ್ತಿತರೆಡೆ ನೂರಾರು ಭಕ್ತರು ಬೆಳಗ್ಗೆ ಎಳ್ಳು ಹಚ್ಚಿಕೊಂಡು ಪುಣ್ಯಸ್ನಾನ ನೆರವೇರಿಸಿದರು.
ತಮಿಳರಿಂದ ಪೊಂಗಲ್ ಆಚರಣೆ: ಸಂಕ್ರಮಣದಂದು ಕನ್ನಡಿಗರು ಪರ್ವ ಕಾಲ ಆಚರಿಸಿದರೆ, ತಮಿಳರು ಪಟ್ಟಣದಲ್ಲಿರು ತಮಿಳರು ಕೃಷಿಕರ ಹಬ್ಬವನ್ನಾಗಿ ಆಚರಿಸಿದರು. ಉತ್ತಮ ಆದಾಯ ಬೆಳೆ ನೀಡಿದ ಸೂರ್ಯ ದೇವನಿಗೆ ಪೊಂಗಲ್ ಪೂಜೆ ಸಲ್ಲಿಸಿ ಕೃತಜ್ಞತೆ ಸಲ್ಲಿಸಿದರು. ಹಟ್ಟಿಚಿನ್ನದಗಣಿಯ ತಮಿಳು ಸಂಘದಿಂದ ತಮಿಳು ಸಂಘಂ ಕಚೇರಿ ಆವರಣದಲ್ಲಿ ಸಾಂಪ್ರದಾಯಿಕವಾಗಿ ಗಡಿಗೆಯಲ್ಲಿ ಪೊಂಗಲ್ ತಯಾರಿಸಿ ಕಬ್ಬು ಮತ್ತಿತರ ಬೆಳೆ ಇಟ್ಟು ಪೂಜೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಶೇಖರನ್ ಪ್ಲಾಜಾ, ಪ್ರಧಾನ ಕಾರ್ಯದರ್ಶಿ ಇಳಂಗೋವನ್ ಮೆಟ್ಟಿ, ಹ.ಚಿ.ಗ ಕಂಪನಿ ಕ್ರೀಡಾ ಸಂಸ್ಥೆ ಕಾರ್ಯದರ್ಶಿ ನವೀನ್ ಕುಮಾರ್, ಪ್ರಮುಖರಾದ ಅಶೋಕ್, ಅರುಣ ಕುಮಾರ್ ಇದ್ದರು.