ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ವತಿಯಿಂದ ಮಾ.8ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮಹಿಳಾ ಕಲೋತ್ಸವ ಆಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಅಧ್ಯಕ್ಷೆ ಚಂಚಲಾ ತೇಜೋಮಯ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗೆ ಮಹಿಳಾ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಜಾಥಾದಲ್ಲಿ ಎಲ್ಲ ತರಹದ ವಾಹನಗಳಿಗೆ ಮಹಿಳೆಯರೇ ಚಾಲಕರಾಗಿರುತ್ತಾರೆ. ಮಹಿಳಾ ಚೆಂಡೆ ತಂಡ, ನಾಸಿಕ್ ಬ್ಯಾಂಡ್, ದೇಶಕ್ಕಾಗಿ ಹೋರಾಟ ನಡೆಸಿದ ಮಹಿಳೆಯರ ಶೌರ್ಯ ಪ್ರದರ್ಶನ ಬಿಂಬಿಸುವ ವೇಷಭೂಷಣಗಳನ್ನು ಧರಿಸಿದ ಮಹಿಳಾ ಕಲಾ ತಂಡಗಳು ಜಾಥಾದಲ್ಲಿ ಇರಲಿವೆ. ಜಾಥಾದಲ್ಲಿ ಸೈಕಲ್, ದ್ವಿಚಕ್ರವಾಹನ, ರಿಕ್ಷಾ, ಕಾರು, ಬಸ್, ಆ್ಯಂಬುಲೆನ್ಸ್, ಟ್ರಕ್, ಕುದುರೆ ಸವಾರಿ ಸಾಗಲಿವೆ ಎಂದರು.
ಪುರಭವನದಲ್ಲಿ ಬೆಳಗ್ಗೆ 10.30ಕ್ಕೆಸಭಾ ಕಾರ್ಯಕ್ರಮ ನಡೆಯಲಿದೆ. ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ ಬಿ.ಜಿ. ಉದ್ಘಾಟಿಸುವರು. ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತರಿರುವರು. ಬ್ಯಾಂಕ್ ಆ್ ಬರೋಡಾ ಜನರಲ್ ಮ್ಯಾನೇಜರ್ ಗಾಯತ್ರಿ ಆರ್. ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಾಧಕರನ್ನು ಉಪಮೇಯರ್ ಪೂರ್ಣಿಮಾ ಸನ್ಮಾನಿಸುವರು. ಉದ್ಯಮಿ ಸುಮಲತಾ ಎನ್.ಸುವರ್ಣ ಲೋಗೊ ಅನಾವರಣ ಮಾಡುವರು. ಕರಾವಳಿ ಲೇಖಕಿಯರ– ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರ್ ದಿಕ್ಸೂಚಿ ಭಾಷಣ ಮಾಡುವರು ಎಂದರು.
ಮಧ್ಯಾಹ್ನ 3ಕ್ಕೆ ಸಮಾರೋಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ., ಪ್ರಮುಖರಾದ ಆರೂರು ಲಕ್ಷ್ಮಿರಾವ್, ಶಹನಾಝ್ ಎಂ., ಗ್ರೆಟ್ಟಾ ಪಿಂಟೊ, ನರೇಶ್ ಸಸಿಹಿತ್ಲು ಅತಿಥಿಯಾಗಿ ಭಾಗವಹಿಸುವರು ಎಂದರು.
ಒಕ್ಕೂಟದ ಪದಾಧಿಕಾರಿಗಳಾದ ಸುಖಲಾಕ್ಷಿ ವೈ. ಸುವರ್ಣ, ಮನೋರಮಾ ಉಮೇಶನ್, ಶಾಂತಾ ಬಂಗೇರ, ಚಂದ್ರಾಕ್ಷಿ ರೈ ಉಪಸ್ಥಿತರಿದ್ದರು.