ಬೆಂಗಳೂರು: ಲಾಕ್ಡೌನ್ ವೇಳೆ ಅನಗತ್ಯವಾಗಿ ಓಡಾಡುತ್ತಿದ್ದ ಆಟೋವನ್ನು ಸೀಜ್ ಮಾಡಿ ಪೊಲೀಸ್ ಠಾಣೆಗೆ ಚಲಾಯಿಸಿಕೊಂಡು ಹೋಗುವಾಗ ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪೇದೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.
ತಮ್ಮ ಠಾಣಾ ವ್ಯಾಪ್ತಿಯಲ್ಲಿ ಆಟೋ ಓಡಾಡುತ್ತಿದ್ದನ್ನು ಗಮನಿಸಿದ ಪೀಣ್ಯ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ನಾಗೇಶ್, ಭಾನುವಾರ ಆಟೋವನ್ನು ತಡೆದು ವಶಪಡಿಸಿಕೊಂಡಿದ್ದರು. ಬಳಿಕ ಪಕ್ಕದಲ್ಲೇ ಇದ್ದ ಠಾಣೆಗೆ ಚಲಾಯಿಸಿಕೊಂಡು ಹೋಗುವಾಗ ನಿಯಂತ್ರಣ ಕಳೆದುಕೊಂಡು ಮೊದಲು ಡಿವೈಡರ್ಗೆ ಡಿಕ್ಕಿ ಹೊಡೆದು ತಕ್ಷಣ ನೆಲಕ್ಕೆ ಬಿದ್ದಿದ್ದರು. ಈ ವೇಳೆ ತಲೆಗೆ ಏಟು ಬಿದ್ದಿತ್ತು. ಅಲ್ಲದೆ, ದುರಾದೃಷ್ಟವಶಾತ್ ನಾಗೇಶ್ ಅವರಿಗೆ ಹೃದಯಾಘಾತವು ಆಗಿತ್ತು.
ಕೂಡಲೇ ಅವರನ್ನು ಜಾಲಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿದ್ದ ನಾಗೇಶ್ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿದ್ದಾರೆ.
ನಿನ್ನೆ ಆಸ್ಪತ್ರೆಗೆ ಭೇಟಿ ನೀಡಿದ್ದ ಗೃಹ ಸಚಿವರು
ನಾಗೇಶ್ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ನಿನ್ನೆ ಸಂಜೆ ಆಸ್ಪತ್ರೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಆರೋಗ್ಯ ಸ್ಥಿತಿ ವಿಚಾರಿಸಿದ್ದರು. ಈ ವೇಳೆ ಮಾತನಾಡಿದ ಅವರು ಪೀಣ್ಯ ಮುಖ್ಯಪೇದೆ ನಾಗೇಶ್ ಕರೋನ ಕರ್ತವ್ಯದ ವೇಳೆ ಅಪಘಾತಕ್ಕೀಡಾಗಿದ್ದಾರೆ. ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಮುಂದುವರೆದಿದೆ. ಕರೋನಾ ರೋಗ ತಡೆಗಾಗಿ ನಮ್ಮ ಇಲಾಖೆಯ ಪೊಲೀಸರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ತುಮಕೂರಿನ ಗೊರವನಹಳ್ಳಿಯ ಪೇದೆ ನಾಗೇಶ್ ಗುಣಮುಖರಾಗಿ ಬರಲಿ ಎಂದರು ಆಶಿಸಿದ್ದರು.
ಇಬ್ಬರು ಮಕ್ಕಳಿರುವ ನಾಗೇಶ್ ಮುಖ್ಯಪೇದೆಯಾಗಿ ಇಲಾಖೆಯಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಕರ್ತವ್ಯದ ವೇಳೆ ಅಪಘಾತಕ್ಕೀಡಾದಾಗ ಇಲಾಖೆ ಪೊಲೀಸರ ನೆರವಿಗೆ ಧಾವಿಸುತ್ತದೆ. ಸರ್ಕಾರದಿಂದ ಸಿಗುವ ವಿಮೆ ಮತ್ತು ಭತ್ಯೆ ದೊರೆಯುತ್ತದೆ. ನಾಗೇಶ್ ಸಹ ಕರ್ತವ್ಯದ ವೇಳೆ ತೊಂದರೆಗೆ ಒಳಗಾಗಿದ್ದಾರೆ. ಸರ್ಕಾರದ ಜತೆ ಸಮಾಲೋಚನೆ ನಡೆಸಲಾಗುವುದು. ನಮ್ಮ ಪೊಲೀಸರಿಗೆ ಯಾವುದೇ ತೊಂದರೆ ಆಗದಂತೆ ನಡೆದುಕೊಳ್ತೇವೆ. ಸಂಕಷ್ಟದ ಸಂದರ್ಭಗಳಲ್ಲಿ ನಾವು ನಮ್ಮ ಇಲಾಖೆಯ ಸಿಬ್ಬಂದಿಯ ಜತೆಗಿರುತ್ತೇವೆ ಎಂದು ಗೃಹ ಸಚಿವರು ಭರವಸೆ ನೀಡಿದ್ದರು. ಆದರೆ, ತಲೆಗೆ ತುಂಬಾ ಪೆಟ್ಟು ಬಿದ್ದಿದ್ದರಿಂದ ನಾಗೇಶ್ ಕೊನೆಯುಸಿರೆಳೆದಿದ್ದಾರೆ. (ದಿಗ್ವಿಜಯ ನ್ಯೂಸ್)