ನವದೆಹಲಿ : ‘ಜಾಗತಿಕ ಮಟ್ಟದಲ್ಲಿ ಹರಡಿರುವ ಕರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ರಾಷ್ಟ್ರದ ಪ್ರತಿಕ್ರಿಯೆ ಮತ್ತು ಕಾರ್ಯತಂತ್ರ ಸಂಪೂರ್ಣವಾಗಿ ವೈದ್ಯಕೀಯ ಮತ್ತು ವೈಜ್ಞಾನಿಕ ಅಭಿಪ್ರಾಯವನ್ನು ಆಧರಿಸಿದ್ದಾಗಿದೆ. ಆದ್ದರಿಂದ ಕರೊನಾ ಲಸಿಕಾ ನೀತಿಗೆ ಸಂಬಂಧಿಸಿದಂತೆ ನ್ಯಾಯಾಂಗ ಮಧ್ಯಪ್ರವೇಶಿಸುವುದು ಸೂಕ್ತವಲ್ಲ’ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬೇರೆ ಬೇರೆ ದರದಲ್ಲಿ ಲಸಿಕೆ ಲಭ್ಯವಾಗುತ್ತಿರುವ ಬಗ್ಗೆ ಮತ್ತು ಹಲವು ರಾಜ್ಯಗಳು ಲಸಿಕೆ ಕೊರತೆ ಎದುರಿಸುತ್ತಿರುವ ಬಗ್ಗೆ ವಿವರಣೆ ಕೇಳಿದ್ದ ಸುಪ್ರೀಂ ಕೋರ್ಟ್ ಮುಂದೆ ಕೇಂದ್ರ ಸರ್ಕಾರ ಈ ರೀತಿ ಹೇಳಿಕೆ ಸಲ್ಲಿಸಿದೆ. ಲಸಿಕೆಗೆ ಸಂಬಂಧಿಸಿದಂತೆ ಕೇಂದ್ರದ ನೀತಿ ಮತ್ತು ನಿರ್ಣಯಗಳನ್ನು ಸಮರ್ಥಿಸಿಕೊಂಡಿರುವ ಸರ್ಕಾರ, ಉತ್ತಮ ಉದ್ದೇಶದಿಂದಲೇ ಆಗಲಿ, ನ್ಯಾಯಾಲಯವು ಮಧ್ಯಪ್ರವೇಶಿಸಿದಲ್ಲಿ ಕಲ್ಪಿಸಿಕೊಳ್ಳಲಾಗದಂತಹ ಪರಿಣಾಮಗಳು ಎದುರಾಗಬಹುದು ಎಂದು ಹೇಳಿದೆ.
ಇದನ್ನೂ ಓದಿ: ಬಂಗಾಳ ವಿಧಾನಸಭೆಯಲ್ಲಿ ಟಿಎಂಸಿ ವಿರುದ್ಧ ಮಾಜಿ ಟಿಎಂಸಿ !
ಕಳೆದ ವಾರದ ವಿಚಾರಣೆಯಲ್ಲಿ ನ್ಯಾಯಪೀಠವು, “ಸಂವಿಧಾನ ನೀಡಿರುವ ಸಮಾನತೆ (ಪರಿಚ್ಛೇದ 14) ಹಾಗೂ ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ (ಪರಿಚ್ಛೇದ 21) ಹಕ್ಕುಗಳ ದೃಷ್ಟಿಯಿಂದ” ಲಸಿಕೆಗಳಿಗೆ ನಿಗದಿಯಾಗಿರುವ ಬೆಲೆಗಳನ್ನು ಪುನರ್ಪರಿಶೀಲನೆ ಮಾಡಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಪ್ರತಿಕ್ರಿಯೆಯಾಗಿ ಅಫಿಡೆವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರವು, ದೇಶದ ಎಲ್ಲಾ ಭಾಗಗಳಲ್ಲೂ ಲಸಿಕೆಗಳಿಗೆ ಒಂದೇ ದರ ನಿಗದಿಯಾಗಿದೆ. ಸಾಧ್ಯವಾದಷ್ಟು ಲಸಿಕೆಗಳನ್ನು ಕೇಂದ್ರವೇ ಖರೀದಿಸಿ ಎಲ್ಲಾ ರಾಜ್ಯಗಳಿಗೆ ಹಂಚಲಿದೆ. ಇಲ್ಲೀವರೆಗೆ 17 ಕೋಟಿ ಡೋಸ್ ಲಸಿಕೆಗಳನ್ನು ಜನರಿಗೆ ನೀಡಲಾಗಿದೆ ಎಂದೂ ತಿಳಿಸಿದೆ.
ಈ ಸಂಬಂಧ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್.ಎನ್.ರಾವ್ ಮತ್ತು ಎಸ್.ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠವು ಇಂದು ಬೆಳಿಗ್ಗೆ ವರ್ಚುವಲ್ ಆಗಿ ವಿಚಾರಣೆ ಆರಂಭಿಸಿತು. ತಾಂತ್ರಿಕ ಸಮಸ್ಯೆಯಿಂದ ಸಂಪರ್ಕ ಕಡಿತಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಕೇಂದ್ರದ ವಿವರಣೆಯನ್ನು ಪರಿಶೀಲಿಸಲು ಸಮಯ ಬೇಕಾಗಿರುವುದರಿಂದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು. (ಏಜೆನ್ಸೀಸ್)
ಕರ್ಫ್ಯೂ ಇದೆ ಅಂತ ಆ್ಯಂಬುಲೆನ್ಸ್ನಲ್ಲಿ ಪ್ರಯಾಣಿಸಿದ ಬಿಗ್ ಬಾಸ್ ಸ್ಪರ್ಧಿ
ಅಸ್ಸಾಂನ 15ನೇ ಸಿಎಂ ಆದ ಹಿಮಂತ ಬಿಸ್ವ ಸರ್ಮ