ಕುಶಾಲನಗರ: ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಮಂಗಳವಾರ ಸೀಮಂತ ಕಾರ್ಯ ಮಾಡಲಾಯಿತು.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂದನ್ ಮಾತನಾಡಿ, ಗರ್ಭಿಣಿಯರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ತಾಯಿಯಿಂದ ಮಗುವಿಗೆ ಎಚ್ಐವಿ, ಸಿಫಿಲಿಸ್ ಹಾಗೂ ಹೆಪಟೈಟಿಸ್ ಹರಡುವಿಕೆ ನಿರ್ಮೂಲನೆಗಾಗಿ ಆಂದೋಲನದ ಮಾಡಲಾಗುತ್ತಿದೆ. ಇದರ ಅಂಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ 42 ಗರ್ಭಿಣಿಯರಿಗೆ ಸೀಮಂತ ಮಾಡಲಾಗಿದೆ ಎಂದರು.
ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಪ್ರತಿಭಾ, ಗರ್ಭಿಣಿ ಮಹಿಳೆಯರ ಆರೋಗ್ಯ ಪದ್ಧತಿ, ಕಾಲಾನುಕ್ರಮವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ರಕ್ತ ಪರೀಕ್ಷೆ, ಗರ್ಭನಿರೋಧಕಗಳ ಬಳಕೆ ಸೇರಿದಂತೆ ಸಂಪೂರ್ಣ ಆರೋಗ್ಯ ನಿರ್ವಹಣೆ ಕುರಿತಾಗಿ ತಿಳಿಸಿದರು.
ತಾಲೂಕು ಆರೋಗ್ಯ ಸುರಕ್ಷಾ ಅಧಿಕಾರಿ ಕೆ.ವಿ.ಅಶ್ವಿನಿ, ವೈದ್ಯಾಧಿಕಾರಿ ಡಾ.ಪ್ರಾಣೇಶ್, ಆಸ್ಪತ್ರೆಯ ಕಚೇರಿ ಅಧೀಕ್ಷಕಿ ಅನಿತಾ, ಹಿರಿಯ ನರ್ಸ್ ಮಂಜುಳಾ, ಆಪ್ತ ಸಮಾಲೋಚಕಿ ಮುತ್ತಮ್ಮ, ಶ್ರೀಲತಾ, ದಿವಾಕರ್ ಇತರರು ಇದ್ದರು.