ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗುರುವಾರ ಮಧ್ಯಾಹ್ನ ಮಳೆಯಾಗಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಬಿಳಿಗಿರಿರಂಗನಬೆಟ್ಟ ಸೇರಿದಂತೆ ತಾಲೂಕಿನ ವಿವಿಧೆಡೆ ಮಳೆ ಸುರಿಯಿತು. ತಾಲೂಕಿನಾದ್ಯಂತ ಭತ್ತದ ಕಟಾವು ನಡೆಯುತ್ತಿದ್ದು, ಅಕಾಲಿಕ ಮಳೆಯಿಂದ ಭತ್ತದ ಯಂತ್ರಗಳು ಜಮೀನಿಗೆ ಇಳಿಯಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಭತ್ತ ಕಟಾವು ಮಾಡಿ ಜಮೀನಿನಲ್ಲೇ ರಾಶಿ ಮಾಡಲಾಗಿರುವ ಬೆಳೆಯನ್ನು ರಕ್ಷಿಸಲು ರೈತರು ಪರದಾಡುವಂತಾಗಿತ್ತು.
ಪಟ್ಟಣದ ಕೆ.ಕೆ. ರಸ್ತೆ ಹದಗೆಟ್ಟಿದೆ. ಈ ರಸ್ತೆಯ ಕೆಲವೆಡೆ ಹಳ್ಳಗಳಿದ್ದು ಇದರಲ್ಲಿ ಮಳೆ ನೀರು ಸಂಗ್ರಹವಾದ್ದರಿಂದ ಪಾದಚಾರಿಗಳು ಈಡಾಡಲು ಸಂಕಷ್ಟಪಡಬೇಕಾಯಿತು. ಮಳೆಯಿಂದ ರಕ್ಷಣೆ ಪಡೆಯಲು ಬಸ್ ನಿಲ್ದಾಣದಲ್ಲಿ ಶೆಲ್ಟರ್ ಇಲ್ಲದ ಕಾರಣ ಪ್ರಯಾಣಿಕರು ಪರದಾಡುವಂತಾಗಿತ್ತು.