ಕಾರವಾರ: ಸಾರಾಯಿ ಕುಡಿಯಲು ಹಣ ಕೊಡದ ಕಾರಣ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಕೊಲೆಗಾರನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಹಳಿಯಾಳ ತಟ್ಟಿಹಳ್ಳದ ಬಾಬು ಸಗ್ಗು ಗಾವಡೆ ಶಿಕ್ಷೆಗೊಳಗಾಗಿದ್ದಾನೆ. ಆತನಿಗೆ 60 ಸಾವಿರ ರೂ. ದಂಡ ವಿಧಿಸಿದ್ದು, ಅದರಲ್ಲಿ 50 ಸಾವಿರ ರೂ.ಗಳನ್ನು ಮೃತಳ ಅವಲಂಬಿತರಿಗೆ ನೀಡಲು ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ:ಮುಂಡಗೋಡ ಪಟ್ಟಣವನ್ನು ತಲ್ಲಣಗೊಳಿಸಿದ್ದ ದರೋಡೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ
2014 ರ ಮಾರ್ಚ್ 23 ರಂದು ಕಟ್ಟಿಗೆ ತರುವ ಸಲುವಾಗಿ ಕಾಡಿಗೆ ಹೋಗಿದ್ದ ಶೈಲಾ ಸಗ್ಗಿಬಾಯಿಯೊಂದಿಗೆ ಬಾಬು ಸಗ್ಗು ಗಾವಡೆ ಸಾರಾಯಿ ಕುಡಿಯಲು ಹಣ ಕೇಳಿದ್ದ. ಆಕೆ ಸಿಟ್ಟುಗೊಂಡು ತನ್ನ ಬಳಿ ಇದ್ದ ಹಣವನ್ನು ಗಂಡನ ಮುಖದ ಮೇಲೆ ಎಸೆದಿದ್ದಳು. ಅದರಿಂದ ಅವಮಾನ, ಸಿಟ್ಟುಗೊಂಡು ಸಗ್ಗು ಕಟ್ಟಿಗೆ ಕಡಿಯಲು ತಂದಿದ್ದ ಕೊಡಲಿಯಿಂದ ಆಕೆಯ ಕುತ್ತಿಗೆ ಕಡಿದಿದ್ದ.
ಆಗಿನ ಹಳಿಯಾಳ ಠಾಣೆಯ ಸಿಪಿಐ ಶ್ರೀನಿವಾಸ ಹಾಂಡ ಬಾಬು ಗಾವಡೆಯನ್ನು ಬಂಧಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಶಿರಸಿ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ್ ವಾದ ಮಂಡಿಸಿದ್ದರು.