ಪುತ್ತೂರು: ತಾಲೂಕು ಪಂಚಾಯಿತಿ ಕಚೇರಿಯ ಲೆಟರ್ಹೆಡ್, ಸೀಲ್ ಮತ್ತು ಸಹಿಯನ್ನು ದುರುಪಯೋಗಪಡಿಸಿದ ನಿಯೋಜನೆ ಮೇರೆಗೆ ಬೆರಳಚ್ಚುಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಶಿವಾನಂದ(55) ಎಂಬಾತನ ಮೇಲೆ ಪುತ್ತೂರು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ.
ಕಚೇರಿಯ ಪತ್ರ ವ್ಯವಹಾರ ರವಾನೆ ಕೆಲಸವನ್ನೂ ಶಿವಾನಂದ ನಿರ್ವಹಿಸುತ್ತಿದ್ದನು. ಹೈಕೋರ್ಟ್ ಪ್ರಕರಣವೊಂದರಲ್ಲಿ ಕಳೆದ ಜೂ.25ರಂದು ತೀರ್ಪು ನೀಡಿದ್ದು, ಯಾವುದೇ ಪತ್ರ ವ್ಯವಹಾರ ತಾಲೂಕು ಕಚೇರಿಯಿಂದ ಅಧಿಕೃತವಾಗಿ ನಡೆದಿಲ್ಲ. ಆದರೆ ಕಚೇರಿ ರವಾನೆ ಪಟ್ಟಿ ಪರಿಶೀಲಿಸಿದಾಗ ವಕೀಲರಿಗೂ ಪತ್ರ ರವಾನೆಯಾಗಿರುವುದು ಕಂಡು ಬಂದಿತ್ತು. ಶಿವಾನಂದ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಗಮನಕ್ಕೆ ತಾರದೆ ಕಚೇರಿಯ ಲೆಟರ್ಹೆಡ್, ರಬ್ಬರ್ ಸ್ಟಾಂಪ್, ಕಾರ್ಯನಿರ್ವಾಹಣಾಧಿಕಾರಿ ಸಹಿಯನ್ನು ದುರುಪಯೋಗಪಡಿಸಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.