More

    ಸಂಪಾದಕೀಯ: ತಾರ್ಕಿಕ ಅಂತ್ಯ ಕಾಣಲಿ

    ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್​ಔಟ್ ನೋಟಿಸ್ ಹೊರಡಿಸಲಾಗಿದೆ. ಇದು ಅತ್ಯಂತ ಗಂಭೀರ ಹಾಗೂ ಅಷ್ಟೇ ಸೂಕ್ಷ್ಮವಾದ ಪ್ರಕರಣ. ಆದರೆ, ಈ ಪ್ರಕರಣವನ್ನು ಬೀದಿರಂಪವಾಗಿಸುತ್ತಿರುವುದು ಸರ್ವಥಾ ಸರಿಯಲ್ಲ. ಇಂಥ ಹೊತ್ತಲ್ಲಿ ಕೆಲವರು ಸಂವೇದನೆಯನ್ನೇ ಕಳೆದುಕೊಂಡಂತೆ ವರ್ತಿಸುತ್ತಿರುವುದು ತೀರಾ ದುರದೃಷ್ಟಕರ. ಲೈಂಗಿಕ ದೌರ್ಜನ್ಯದ ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ, ಸಂಚು ಹೂಡಿದವರಿಗೆ, ಷಡ್ಯಂತ್ರ ಮಾಡಿದವರಿಗೆ, ಮಹಿಳೆಯರ ವಿಡಿಯೋಗಳನ್ನು ಲೀಕ್ ಮಾಡಿ ಹಂಚಿದವರಿಗೆ ಹೀಗೆ ಯಾರೆಲ್ಲ ಕಾನೂನನ್ನು ಉಲ್ಲಂಘಿಸಿದ್ದಾರೋ ಅವರಿಗೆ ಕಠಿಣಾತಿಕಠಿಣ ಶಿಕ್ಷೆಯಾಗಲೇ ಬೇಕು. ರಾಜ್ಯ ಸರ್ಕಾರ ಈಗಾಗಲೇ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಅದು ತನಿಖೆಯನ್ನೂ ಆರಂಭಿಸಿದೆ. ರಾಜಕೀಯ ಹಸ್ತಕ್ಷೇಪವಿಲ್ಲದೆ, ಪ್ರಭಾವ ಬೀರದೆ ತನಿಖೆ ಸಮರ್ಪಕವಾಗಿ, ಪರಿಣಾಮಕಾರಿಯಾಗಿ ನಡೆಯಬೇಕು.

    ರಾಜಕೀಯದ ಆಟಾಟೋಪಗಳೇನೇ ಇರಲಿ. ಅಶ್ಲೀಲ ವಿಡಿಯೋಗಳಲ್ಲಿ ಮಹಿಳೆಯರ ಗುರುತು ಸಿಗದಂತೆ, ಮುಖವನ್ನು ಬ್ಲರ್ ಮಾಡಬಹುದಿತ್ತು. ಈ ಮಹಿಳೆಯರು ಅನುಭವಿಸುವ ಮುಜುಗರ, ಮಾನಸಿಕ ವೇದನೆಗೆ ಯಾರು ಹೊಣೆ? ಅಶ್ಲೀಲ ವಿಡಿಯೋಗಳು ಮನರಂಜನೆಯ ಸರಕಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಇವನ್ನು ವೀಕ್ಷಿಸುತ್ತ ವಿಕೃತ ಆನಂದ ಪಡೆಯುವ ಮನಸ್ಸುಗಳು ಕೂಡ ಅಷ್ಟೇ ತಪ್ಪಿತಸ್ಥರು. ಸಂತ್ರಸ್ತ ಮಹಿಳೆಯರು ಮುಂದಿನ ದಿನಗಳಲ್ಲಿ ಮರ್ಯಾದೆಗೆ ಹೆದರಿ ಅತಿರೇಕದ ಕ್ರಮಕ್ಕೆ ಕೈ ಹಾಕಿದರೆ ಅದಕ್ಕೆ ಯಾರು ಹೊಣೆ? ಈ ಬಗ್ಗೆ ಒಂದಿಷ್ಟು ವಿವೇಚನೆ ಇಲ್ಲದೆ ವಿಡಿಯೋ ಹರಿಯಬಿಟ್ಟಿರುವುದು ನಿಜಕ್ಕೂ ವಿಕೃತ. ಕೃತ್ಯ ಎಸಗಿದ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ; ಆದರೆ ಸಂತ್ರಸ್ತರ ಬದುಕು ಏನಾಗಬೇಡ? ಸಂತ್ರಸ್ತ ಮಹಿಳೆಯರಿಗೆ ಸಂಪೂರ್ಣ ರಕ್ಷಣೆ ಒದಗಿಸುವ ಕರ್ತವ್ಯ ರಾಜ್ಯ ಸರ್ಕಾರದ್ದು.

    ಯಾರೇ ಆಗಲಿ ಇಂಥ ಕೃತ್ಯಗಳಲ್ಲಿ ತೊಡಗುವುದು ಅಕ್ಷಮ್ಯವೇ. ದೂರುದುಮ್ಮಾನ ಹೇಳಿಕೊಂಡು ಅಧಿಕಾರಿಗಳ ಬಳಿ, ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳ ಬಳಿ ಜನಸಾಮಾನ್ಯರು ಪ್ರತಿನಿತ್ಯವೂ ಬಂದೇ ಬರುತ್ತಾರೆ. ಅವರ ಕಷ್ಟಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯವೇ ಹೌದು. ಆದರೆ, ಅಧಿಕಾರವನ್ನೇ ದುರುಪಯೋಗ ಪಡಿಸಿಕೊಳ್ಳುವ ಜನಪ್ರತಿನಿಧಿಗಳು ಸಮಾಜಕ್ಕೆ ಕಪು್ಪಚುಕ್ಕೆ ಇದ್ದಂತೆ. ಈ ಎಲ್ಲ ಪ್ರಕರಣವನ್ನು ಅವಲೋಕಿಸಿದಾಗ ಜನಪ್ರತಿನಿಧಿಗಳಿಗೆ ನೈತಿಕತೆಯ ಪಾಠ ಅಗತ್ಯವಿದೆ ಎಂಬುದು ಗಮನಾರ್ಹ. ಸಮಾಜದಲ್ಲಿ ಯಾವುದೇ ಕೆಲಸಗಳು ನೈತಿಕತೆಯ ಎಲ್ಲೆಯನ್ನು ಮೀರಬಾರದು. ಇದು ವ್ಯಕ್ತಿತ್ವವನ್ನು ಕೂಡ ನಿರ್ಧರಿಸುವ ಅಂಶ. ಆದರೆ, ನೈತಿಕತೆಯ ಬಗ್ಗೆ ಒಂದಿಷ್ಟು ಯೋಚಿಸದೆ ನೀಚ ಕೃತ್ಯಗಳಲ್ಲಿ ತೊಡಗುವವರಿಗೆ ಸಮಾಜ ಪಾಠ ಕಲಿಸಬೇಕು. ವಿಪರ್ಯಾಸವೆಂದರೆ, ಇಲ್ಲಿ ನಾಗರಿಕ ಪ್ರಜ್ಞೆಯೂ ಸೋಲುತ್ತಿರುವುದು ಮತ್ತೊಂದು ಅಪಾಯ. ನಾಗರಿಕ ಸಮುದಾಯ ಕೂಡ ಇಂಥ ಸೂಕ್ಷ್ಮ ಪ್ರಕರಣಗಳ ಬಗ್ಗೆ ಹಾದಿಬೀದಿಯಲ್ಲಿ ಚರ್ಚೆ ಮಾಡುವುದು ಸರಿಯಲ್ಲ. ನೈತಿಕತೆಯ ಗೆರೆ ದಾಟಿದರೆ ಎಷ್ಟೆಲ್ಲ ಅಪಸವ್ಯಗಳು ಸಂಭವಿಸುತ್ತವೆ ಎಂಬುದಕ್ಕೆ ಈ ಪ್ರಕರಣ ದೊಡ್ಡ ನಿದರ್ಶನ.

    ಹುಬ್ಬಳ್ಳಿ: ಹಿಂದು ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಕೊಲೆ ಬೆದರಿಕೆ, ಆರೋಪಿ ವಶಕ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts