More

    ಹವ್ಯಕ ಸಮಾಜ ಉಳಿವಿಗೆ ‘ಸಂ’ಕರ ಗಟ್ಟಿಯಾಗಲಿ

    ಯಲ್ಲಾಪುರ: ಸಂಘಟನೆ, ಸಂಖ್ಯೆ ಹಾಗೂ ಸಂಸ್ಕಾರವೆಂಬ ಮೂರು ‘ಸಂ’ ಕರಗಳನ್ನು ಗಟ್ಟಿಯಾಗಿಸಿಕೊಂಡು ಹೋದರೆ ಹವ್ಯಕ ಸಮಾಜ ಉಳಿಯಲು, ಇನ್ನಷ್ಟು ಬೆಳೆಯಲು ಸಾಧ್ಯ. ‘ಸಂ’ಕರಗಳನ್ನು ತಡೆದು ಶಂಕರರ ಮಾರ್ಗದರ್ಶನದಲ್ಲಿ ನಡೆಯುವ ಪ್ರಯತ್ನ ಮಾಡಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

    ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದ ಆವಾರದಲ್ಲಿ ಅಖಿಲ ಹವ್ಯಕ ಮಹಾಸಭೆ ಆಯೋಜಿಸಿದ್ದ ಪ್ರತಿಬಿಂಬ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ವೈವಾಹಿಕ ಸಮಸ್ಯೆ, ವಿಚ್ಛೇದನ, ಆಸ್ತಿ ಪರಭಾರೆ ಸಮಸ್ಯೆ ಹವ್ಯಕ ಸಮಾಜವನ್ನು ಕಾಡುತ್ತಿದೆ. ಹವ್ಯಕ ಆಸ್ತಿ ಸಂರಕ್ಷಣೆಯ ಬಗೆಗೆ ಮಠದಿಂದ ಕಾರ್ಯಪ್ರವೃತ್ತರಾಗಿದ್ದು, ಆಸ್ತಿ ಸಂರಕ್ಷಣಾ ಸಮಿತಿಯನ್ನು ಪ್ರತಿ ಸೀಮೆಯಲ್ಲಿ ರಚಿಸಿ, ಆಸ್ತಿ ಪರಭಾರೆ ತಡೆಯಲಾಗುತ್ತಿದೆ. ಇದಕ್ಕೆ ಇನ್ನಷ್ಟು ಬಲ ಬರಬೇಕಾದರೆ ಜನರ ಸಹಕಾರ ಅಗತ್ಯ ಎಂದರು.

    ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ ಮಾತನಾಡಿ, ಹವ್ಯಕ ಸಮುದಾಯದವರು ಆಸ್ತಿ ಮಾರಾಟ ಮಾಡಿ ನಗರಗಳತ್ತ ಹೋಗುತ್ತಿರುವುದು ದುರಂತದ ಸಂಗತಿ. ಇದನ್ನು ತಡೆಯಲು ಗುರುಪೀಠದಿಂದ ಸೂಕ್ತ ಮಾರ್ಗದರ್ಶನ ಆಗಬೇಕು ಎಂದು ವಿನಂತಿಸಿದರು.

    ವಿವಿಧ ಕ್ಷೇತ್ರಗಳ ಸಾಧಕರಾದ ವಿದ್ವಾನ್ ವಿಘ್ನೕಶ್ವರ ಭಟ್ಟ ಬಿಸಗೋಡ, ವಿದ್ವಾನ್ ಮಂಜುನಾಥ ಭಟ್ಟ ಮೊಟ್ಟೆಗದ್ದೆ, ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಅನಂತ ಹೆಗಡೆ ದಂತಳಿಗೆ, ನರಸಿಂಹ ಭಟ್ಟ ಹಂಡ್ರಮನೆ ಹಾಗೂ ನಾರಾಯಣ ಹೆಗಡೆ ಕಂಚನಳ್ಳಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹಧನ ವಿತರಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ಜ್ಯೋತಿಷಾಚಾರ್ಯ ನಾಗೇಂದ್ರ ಭಟ್ಟ ಹಿತ್ಲಳ್ಳಿ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ನಿರ್ದೇಶಕರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಪ್ರಶಾಂತ ಹೆಗಡೆ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ನಗರ ಸೀಮಾ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ತಾಲೂಕು ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ, ಶಕ್ತಿ ಗಣಪತಿ ದೇವಸ್ಥಾನದ ಅಧ್ಯಕ್ಷ ಅನಂತ ಗಾಂವ್ಕರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts