ಬಾಳೆಹೊನ್ನೂರು: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ನವೋದಯ ವಿದ್ಯಾಲಯ ಪೂರಕವಾಗಿದೆ ಎಂದು ಎನ್.ಆರ್.ಪುರ ತಾಪಂ ಇಒ ನಯನಾ ಹೇಳಿದರು.
ಸಮೀಪದ ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಶಾಲಾ ಸಂಸತ್ತು ರಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳೇ ನಾಳಿನ ನಾಗರಿಕರು. ಕೆಲವು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ನಾಯಕತ್ವ ಗುಣ ಬೆಳೆದು ಬಂದಿರುತ್ತದೆ. ಇನ್ನೂ ಕೆಲವು ವಕ್ಕಳಿಗೆ ಬೆಳೆಯುತ್ತ ಬರುತ್ತದೆ. ಅಂತಹ ಗುಣಗಳನ್ನು ನವೋದಯ ವಿದ್ಯಾಲಯದಲ್ಲಿ ಬೆಳೆಸಲು ಸಾಧ್ಯ ಎಂದರು.
ವಿದ್ಯಾಲಯದ ಪ್ರಾಚಾರ್ಯ ಆರ್.ಪ್ರೇಮ್ಕುಮಾರ್ ಮಾತನಾಡಿ, ಮಕ್ಕಳು ತಮಗೆ ನೀಡಿದ ಜವಾಬ್ದಾರಿಗಳನ್ನು ಶಿಸ್ತಿನಿಂದ ನಿಭಾಯಿಸಿಕೊಂಡು ಹೋಗುವ ಗುಣ ಬೆಳೆಸಿಕೊಳ್ಳಬೇಕು. ಸ್ನೇಹಿತರಿಗೆ ಯಾವುದೇ ತೊಂದರೆ ಬಂದರೆ ಅವುಗಳನ್ನು ಸರಿಪಡಿಸುವ ಗುಣ ಮಕ್ಕಳಲ್ಲಿ ಇರಬೇಕು. ಪ್ರತಿಯೊಂದು ವಿಷಯಕ್ಕೂ ಮಂತ್ರಿಗಳನ್ನು ಮಾಡಿರುವುದರಿಂದ ಅವರಿಗೆ ಜವಾಬ್ದಾರಿ ನಿಭಾಯಿಸುವ ಮನೋಭಾವ ಬೆಳೆಯಲಿದೆ ಎಂದು ತಿಳಿಸಿದರು.
ಚುನಾಯಿತ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.