ಕೆ.ಆರ್.ನಗರ: ಜಂತುಹುಳುಗಳ ನಿವಾರಣೆಗಾಗಿ ಅಲ್ಬೆಂಡಾಝಾಲ್ ಜಂತುಹುಳು ನಾಶಕ ಮಾತ್ರೆಯನ್ನು 1 ರಿಂದ 19 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ ಕೊಡಿಸಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮಹೇಂದ್ರಪ್ಪ ಹೇಳಿದರು.
ಪಟ್ಟಣದ ಹೊರವಲಯದ ಆದರ್ಶ ವಿದ್ಯಾಲಯದಲ್ಲಿ ಸೋಮವಾರ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಂತುಹುಳುಗಳು ಮಾನವನ ಕರುಳಿನಿಂದ ಪೋಷಕಾಂಶಗಳನ್ನು ಹೀರಿಕೊಂಡು ಜೀವಿಸುವ ಪರಾವಲಂಬಿಗಳಾಗಿದ್ದು, ದುಂಡು ಹುಳುಗಳು, ಚಾಟಿಹುಳು, ಕೊಕ್ಕೆ ಹುಳುಗಳು ಎಂಬ ಮೂರು ವಿಧದಲ್ಲಿ ಇರುತ್ತವೆ ಎಂದು ತಿಳಿಸಿದರು.
ಸಾಮಾನ್ಯ ಮಕ್ಕಳು ಬರಿಗಾಲಿನಲ್ಲಿ ಆಟವಾಡುವುದು, ಕೈಗಳನ್ನು ತೊಳೆಯದೆ ಆಹಾರ ಸೇವಿಸುವುದು, ಬಯಲು ಶೌಚ ಮತ್ತು ನಮ್ಮ ಸುತ್ತಮುತ್ತ ಪರಿಸರ ಸ್ವಚ್ಛವಾಗಿಲ್ಲದ ಕಾರಣಗಳಿಂದ ಜಂತುಹುಳುಗಳು ಈ ಮುಖಾಂತರ ಮಕ್ಕಳ ದೇಹವನ್ನು ಆಕ್ರಮಿಸಿಕೊಳ್ಳುತ್ತವೆ. ಸೋಂಕಿನಿಂದಾಗಿ ಬಳಲುವ ಮಕ್ಕಳಲ್ಲಿ ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ, ಹಸಿವು ಆಗದಿರುವುದು, ನಿಶ್ಯಕ್ತಿ, ಆತಂಕ, ಹೊಟ್ಟೆನೋವು, ವಾಕರಿಕೆ, ವಾಂತಿ ಹಾಗೂ ತೂಕ ಕಡಿಮೆಯಾಗಲಿದೆ. ಆದ್ದರಿಂದ ಅಲ್ಬೆಂಡಾಝಾಲ್ ಮಾತ್ರೆ ಸೇವಿಸಬೇಕು ಎಂದು ಹೇಳಿದರು.
ಕೈಗಳನ್ನು ಸ್ವಚ್ಛವಾಗಿ ತೊಳೆದು ಆಹಾರ ಸೇವಿಸಬೇಕು. ಹೊರಗಿನಿಂದ ತರುವಂತಹ ತರಕಾರಿ, ಹಣ್ಣುಗಳನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ ತಿನ್ನಬೇಕು ಎಂದು ತಿಳಿ ಹೇಳಿದ ಅವರು, ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿರುವ ಜಂತುಹುಳು ನಿವಾರಣಾ ಮಾತ್ರೆಗಳನ್ನು ಮಕ್ಕಳಿಗೆ ಕುಡಿಸಿ ಎಂದು ಪಾಲಕರಿಗೆ ಮನವಿ ಮಾಡಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಂ.ಎಸ್.ನಾಗೇಂದ್ರ, ವೈದ್ಯರಾದ ಡಾ.ದಿನೇಶ್, ಡಾ.ಮೋನಿಕಾ, ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಹಿರಿಯ ಆರೋಗ್ಯ ಮೇಲ್ವಿಚಾರಕ ರಮೇಶ್, ಆದರ್ಶ ಶಾಲೆಯ ಪ್ರಭಾರ ಪ್ರಾಂಶುಪಾಲರಾದ ಸುಜಾತಾ, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀದೇವಿ ಮತ್ತಿತರರು ಹಾಜರಿದ್ದರು