ಎಲ್ಲೆಡೆ ಕರೊನಾ ಮಾರ್ಗಸೂಚಿ ಪಾಲನೆ |
ಕೊಪ್ಪಳ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಿಲ್ಲೆಯಲ್ಲಿ ಬುಧವಾರ ಸರಳವಾಗಿ ಆಚರಿಸಲಾಯಿತು.
ಕರೊನಾ ಕಾರಣಕ್ಕೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಹಬ್ಬದ ವೈಭವ ಅಷ್ಟಾಗಿ ಕಂಡುಬರಲಿಲ್ಲ. ಮಸೀದಿಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ವಕ್ಫ್ ಅಧಿಕಾರಿಗಳು ಎಲ್ಲ ಮಸೀದಿಗಳ ಮುಖ್ಯಸ್ಥರಿಗೆ ಸರ್ಕಾರಿ ನಿಯಮ ಪಾಲನೆಗೆ ಸೂಚಿಸಿದ್ದರು. ಹೀಗಾಗಿ ಗ್ರಾಮೀಣ ಪ್ರದೇಶದ ಜನರು ನಗರಕ್ಕೆ ಪ್ರಾರ್ಥನೆ ಸಲ್ಲಿಸಲು ಬರಲಿಲ್ಲ. ಗ್ರಾಮದ ಮಸೀದಿ ಇಲ್ಲವೇ ಬಯಲು ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ನಗರದ ಯುಸೂಫಿಯಾ ಮಸೀದಿಗೆ ಭೇಟಿ ನೀಡಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಮುಫ್ತಿ ನಜೀರ್ ಅಹಮದ್, ಮುಖಂಡರಾದ ಕಾಟನ್ ಪಾಷಾ, ಬಾಷುಸಾಬ್, ಇಕ್ಬಾಲ್ ಸಿದ್ದಿಕಿ, ಅಕ್ಬರ್ ಪಾಷಾ ಪಲ್ಟನ್ ಹಾಗೂ ಇತರರಿದ್ದರು.