ಬೈಂದೂರು: ಖಂಬದಕೋಣೆ ಬಸ್ ನಿಲ್ದಾಣದ ಬಳಿಯಿರುವ ಮಣಿಕಂಠ ಹೋಟೆಲ್ನ ಅರ್ಧಭಾಗ ತಡರಾತ್ರಿ ಬೆಂಕಿಗಾಹುತಿಯಾಗಿದೆ. ಶುಕ್ರವಾರ ರಾತ್ರಿ 9ಕ್ಕೆ ಎಂದಿನಂತೆ ಮಾಲೀಕ ಅನಂದ ನಾಯ್ಕ ವ್ಯವಹಾರ ಮುಗಿಸಿ ಮನೆಗೆ ತೆರಳಿದ್ದರು. ರಾತ್ರಿ 11.45ಕ್ಕೆ ಹೋಟೆಲ್ಗೆ ಬೆಂಕಿ ತಗುಲಿದ್ದನ್ನು ಪಕ್ಕದ ಮನೆಯವರು ಗಮನಿಸಿ ತಕ್ಷಣ ಆನಂದ ಅವರಿಗೆ ಹಾಗೂ ಬೈಂದೂರು ಅಗ್ನಿಶಾಮಕ ಕೇಂದ್ರಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾದರೂ ಹೋಟೆಲ್ನ ಅರ್ಧಭಾಗ ಸುಟ್ಟುಹೋಗಿದೆ. ಎರಡು ಫ್ರಿಡ್ಜ್, ಇತರ ವಿದ್ಯುತ್ ಉಪಕರಣಗಳು, ಕ್ಯಾಶ್ಕೌಂಟರ್, ಮಾಡು, ಪಕ್ಕಾಸು ಸೇರಿದಂತೆ ಇಂಟೀರಿಯರ್ಸ್ಗಳು ಬೂದಿಯಾಗಿವೆ.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ವೈಯಕ್ತಿಕ ನೆರವು ಘೋಷಿಸಿದ್ದಾರೆ. ಬೈಂದೂರು ತಹಸೀಲ್ದಾರ್ ಬಸಪ್ಪ ಪಿ. ಪೂಜಾರ, ಗ್ರಾಮಲೆಕ್ಕಿಗ ರತ್ನಾಕರ್ ಭೇಟಿ ನೀಡಿ ನಷ್ಟ ಪರಿಶೀಲಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.