ತಿರುವನಂತಪುರ: ಆರ್ಥಿಕ ಸಚಿವ ಥಾಮಸ್ ಐಸಾಕ್ ಅವರು ಮಂಡಿಸಿದ 2020-21ನೇ ಸಾಲಿನ 5ನೇ ರಾಜ್ಯ ಬಜೆಟ್ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸಮತೋಲನಗೊಳಿಸಲಿದೆ ಎಂಬ ಪ್ರಶಂಸೆಯ ಮಾತುಗಳು ಎಲ್ಲೆಡೆ ಕೇಳಿ ಬಂದಿವೆ.
ಸಚಿವ ಥಾಮಸ್ ಅವರ ಪ್ರಕಾರ 1,24,635 ಕೋಟಿ ರೂಪಾಯಿ ವಾರ್ಷಿಕ ಆದಾಯವನ್ನು ನಿರೀಕ್ಷಿಸಲಾಗಿದೆ. 1,29,837 ಕೋಟಿ ರೂಪಾಯಿ ವೆಚ್ಚ ಎಂದು ಅಂದಾಜಿಸಲಾಗಿದ್ದು 15,202 ಕೋಟಿ ರೂಪಾಯಿ ಕೊರತೆ ಬಜೆಟ್ ಇದಾಗಿದೆ ಎಂದಿದ್ದಾರೆ.
ಇಷ್ಟು ಕೊರತೆ ಬಜೆಟ್ನಲ್ಲೂ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ ಸಚಿವ ಥಾಮಸ್ ಅವರು. ಕಲ್ಯಾಣ ಪಿಂಚಣಿ 100 ರೂ.ಗೆ ಹೆಚ್ಚಳ, ವಸತಿ ರಹಿತ ಮಲೆಯಾಳಿಗಳ ಕಲ್ಯಾಣಕ್ಕೆ 900 ಕೋಟಿ ರೂ., 25 ರೂ.ನಂತೆ ಊಟ ಪೂರೈಕೆಗಾಗಿ 1000 ಹೋಟೆಲ್ಗಳ ಸ್ಥಾಪನೆ, ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿಗೆ 1000 ಕೋಟಿ ರೂ. ಮೀಸಲಿರಿಸಲಾಗಿದೆ. ಮರ ನೆಡಲು 2000 ಕೋಟಿ ರೂ. ಸಾವಯವ ಕೃಷಿ ಉತ್ತೇಜನಕ್ಕಾಗಿ 1000 ಕೋಟಿ ರೂ. ನೆರವನ್ನೂ ಪ್ರಕಟಿಸಿದ್ದಾರೆ.
ಜೆಎಸ್ಟಿ ಪರಿಣಾಮಕಾರಿ ಜಾರಿಗೆ 12 ಅಂಶಗಳ ಯೋಜನೆ ಜಾರಿಗೆ ಆದ್ಯತೆ ನೀಡಲಾಗಿದೆ.
ಬಜೆಟ್ ಮಂಡನೆ ವೇಳೆ ಸಚಿವ ಥಾಮಸ್ ಅವರು, ಕೇಂದ್ರ ಸರ್ಕಾರದಿಂದ ಅನುದಾನವನ್ನು ಕಡಿತಗೊಳಿಸಿದೆ. ಕೇಂದ್ರದ ಯೋಜನೆಗಳಿಗೂ ಅನುದಾನ ನೀಡಿಲ್ಲ. ಈ ಎಲ್ಲ ಅಂಶಗಳಿಂದ ರಾಜ್ಯ ಸರ್ಕಾರಕ್ಕೆ ಅರ್ಥಿಕ ಬಿಕ್ಕಟ್ಟು ಆವರಿಸಿದೆ ಎಂದರು.
2016-19ರ ಅವಧಿಯಲ್ಲಿ ರಾಜ್ಯದ ಆದಾಯದ ಕೊರತೆಯು ಶೇ. 2.01 ರಿಂದ 1.55ಕ್ಕೆ ಇಳಿದಿತ್ತು. ಆದಾಯ ಸಂಗ್ರಹಣೆಯನ್ನು ಹೆಚ್ಚಿಸಲು ನಾವು ಪರ್ಯಾಯ ಕಾರ್ಯತಂತ್ರಗಳು ಮತ್ತು ತೆರಿಗೆ ಸುಧಾರಣೆಗಳನ್ನು ವಿನ್ಯಾಸಗೊಳಿಸಿದ್ದೇವೆ. ಏಪ್ರಿಲ್ನಲ್ಲಿ ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂದು ಅಭಿಪ್ರಾಯ ಪಟ್ಟ ಸಚಿವರು, ಇನ್ನೊಂದು ವರ್ಷದವರೆಗೆ ನಾವು ಸುಗಮವಾದ ಆರ್ಥಿಕತೆಯನ್ನು ಹೊಂದುತ್ತೇವೆ ಎಂದು ಥಾಮಸ್ ಐಸಾಕ್ ವಿಶ್ವಾಸ ವ್ಯಕ್ತ ಪಡಿಸಿದರು. (ಏಜೆನ್ಸೀಸ್)