More

    ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಕಾನೂನುಬಾಹಿರವಾಗಿ ಜಾಗ ಮಂಜೂರು

    ರಾಮನಗರ: ಕನಕಪುರದ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿಕೊಡುವಲ್ಲಿಯೂ ನಿಯಮ ಮೀರಲಾಗಿದೆಯೇ?

    ಹೀಗೊಂದು ಪ್ರಶ್ನೆ ಹುಟ್ಟಿ ಕೊಂಡಿದ್ದು, ನಿಯಮ ಗಳನ್ನು ಗಾಳಿಗೆ ತೂರಿ ಟ್ರಸ್ಟ್‌ಗೆ 10 ಎಕರೆ ಜಮೀನು ಮಂಜೂರು ಮಾಡಿಕೊಡಲಾಗಿದೆ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಗೋಮಾಳ ಮಂಜೂರಾತಿ ನಿಯಮ, ವನ್ಯಜೀವಿ ಕಾಯ್ದೆ, ಬಿಎಂಆರ್‌ಡಿಎ ನಿಯಮ ಗಾಳಿಗೆ ತೂರಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

    ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕರೂ, ಕನಕಪುರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಚ್ಚಲು ಶಿವರಾಜು, ಟ್ರಸ್ಟ್‌ಗೆ ಭೂಮಿ ಮಂಜೂರು ಮಾಡಿದ್ದೇ ಕಾನೂನುಬಾಹಿರ ಎಂದು ಆರೋಪಿಸಿದ್ದಾರೆ. ಗೋಮಾಳ ಜಮೀನು ಉಳಿಸಿಕೊಳ್ಳಲು ಹೈಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ 2007ರ ಜನವರಿ 5ರಂದು ಪರಿಷ್ಕೃತ ಆದೇಶ ಹೊರಡಿಸಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಗೋಮಾಳ ಮಂಜೂರಾತಿ ಮಾಡುವಾಗ ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದ್ದಾರೆ.

    ಗೋಮಾಳ, ಗಾಯರಾಣ, ಹುಲ್ಲುಬನಿ ಜಮೀನುಗಳನ್ನು ಖಾಸಗಿ ಸಂಸ್ಥೆಗಾಗಲಿ, ಖಾಸಗಿ ವ್ಯಕ್ತಿಗಾಗಲಿ ಅಥವಾ ಖಾಸಗಿ ಗಣಿಗಾರಿಕೆಗಾಗಲಿ ಮಂಜೂರು ಮಾಡಬಾರದು. ಒಂದು ವೇಳೆ ಯಾವುದೇ ಅರ್ಜಿ ಬಾಕಿ ಇದ್ದಲ್ಲಿ, ಅಂತಹ ಜಮೀನುಗಳನ್ನು ಗ್ರಾಮೀಣ ಸಮುದಾಯದ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಬೇಕು ಎಂದು ಸೂಚಿಸಲಾಗಿದೆ. ಆದರೆ, ಇದೀಗ ಕಪಾಲ ಬೆಟ್ಟ ಗೋಮಾಳವಾಗಿದ್ದರೂ, ಇದರಲ್ಲಿ 10 ಎಕರೆ ಪ್ರದೇಶವನ್ನು ಖಾಸಗಿ ಟ್ರಸ್ಟ್‌ಗೆ ವರ್ಗಾವಣೆ ಮಾಡಿಕೊಟ್ಟಿದ್ದಾರೆ ಎಂದು ಅವರು ದೂರಿದ್ದಾರೆ.

    ಬಿಎಂಆರ್‌ಡಿಎಯಿಂದಲೂ ಅನುಮತಿಯಿಲ್ಲ: ಮತ್ತೊಂದೆಡೆ ಅಭಿವೃದ್ಧಿ ಕೈಗೊಳ್ಳುವ ಮುನ್ನ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯಬೇಕಿದೆ. ಆದರೆ, ಬಿಎಂಆರ್‌ಡಿಎಯಿಂದಲೂ ಅನುಮತಿ ಪಡೆದಿಲ್ಲ.ವನ್ಯಜೀವಿ ಸಂರಕ್ಷಣೆ ಕಾಯ್ದೆ ಪ್ರಕಾರ, ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವ ಮುನ್ನ ರಾಜ್ಯ ಮತ್ತು ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಆದರೆ, ಇಲ್ಲಿಯೂ ನಿಯಮ ಮೀರಲಾಗಿದೆ. ಈ ಬಗ್ಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಶಿವರಾಜು ಆಗ್ರಹಿಸಿದ್ದಾರೆ.

    ನಿಂತ ಕಾಮಗಾರಿ: ವಿರೋಧ ವ್ಯಕ್ತವಾಗುತ್ತಿದ್ದಂತೆ ಕನಕಪುರ ತಾಲೂಕಿನ ಹಾರೋಬೆಲೆ ಸಮೀಪದ ಕಪಾಲ ಬೆಟ್ಟದಲ್ಲಿ ನಡೆಯುತ್ತಿದ್ದ ಯೇಸು ಪ್ರತಿಮೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಡಿ.25ರಂದು ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಚಾಲನೆ ನೀಡಿ, ಜಮೀನಿನ ದಾಖಲೆಯನ್ನು ಹಸ್ತಾಂತರ ಮಾಡಿದ್ದರು. ಇದಾದ ನಂತರ ಪ್ರತಿಮೆ ನಿರ್ಮಾಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಈ ಸಂಬಂಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ನಡೆಯುತ್ತಿದ್ದ ಕಾಮಗಾರಿಗೆ ಬ್ರೇಕ್ ಬಿದ್ದಿದೆ.

    ತಹಸೀಲ್ದಾರ್ ಆನಂದಯ್ಯ ವರ್ಗಾವಣೆ: ಮತ್ತೊಂದು ಮಹತ್ವದ ಬೆಳವಣಿಗೆಯೊಂದರಲ್ಲಿ ರಾತ್ರೋರಾತ್ರಿ ಕನಕಪುರ ತಹಸೀಲ್ದಾರ್ ಆನಂದಯ್ಯ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಯಳಂದೂರು ತಹಸೀಲ್ದಾರ್ ವರ್ಷಾ ಅವರನ್ನು, ಆನಂದಯ್ಯ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಕಂದಾಯ ಸಚಿವರ ಸೂಚನೆ ಮೇರೆಗೆ ಕಳೆದ ಮೂರು ದಿನಗಳ ಹಿಂದಷ್ಟೇ ಕಪಾಲ ಬೆಟ್ಟಕ್ಕೆ ಆನಂದಯ್ಯ ಮತ್ತು ಉಪವಿಭಾಗಾಧಿಕಾರಿ ದಾಕ್ಷಾಯಿಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ, ವರದಿಯನ್ನು ಸಹ ನೀಡಬೇಕಿತ್ತು. ಆನಂದಯ್ಯ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಸುರೇಶ್ ಅವರಿಗೆ ನೆಚ್ಚಿನ ಅಧಿಕಾರಿಯಾಗಿದ್ದು, ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿವಾದ ತಾರಕಕ್ಕೇರಿರುವ ಸಂದರ್ಭದಲ್ಲಿಯೇ ಅವರ ವರ್ಗಾವಣೆಯಾಗಿರುವುದು ಚರ್ಚೆಗೂ ಕಾರಣವಾಗಿದೆ.

    ಸರ್ಕಾರದ ನಿಯಮ ಗಾಳಿಗೆ ತೂರಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿಕೊಡಲಾಗಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಮೆ ನಿರ್ಮಾಣ ಮಾಡಬೇಕು ಎಂದಿದ್ದರೆ, ತಮ್ಮ ಖಾಸಗಿ ಜಮೀನನ್ನು ನಿರ್ಮಾಣಕ್ಕೆ ಕೊಡಲಿ.
    ಅಚ್ಚಲು ಶಿವರಾಜು, ಮಾಜಿ ಅಧ್ಯಕ್ಷ, ಕನಕಪುರ ಯೋಜನಾ ಪ್ರಾಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts