ಸರಗೂರು: ಭಾರತಕ್ಕೆ ಸ್ವಾತಂತ್ರೃ ಸಿಕ್ಕ ನಂತರ ಅಂದಿನ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ತಮ್ಮ ರಾಜ್ಯವನ್ನು ಭಾರತದೊಂದಿಗೆ ವಿಲೀನ ಮಾಡಲು ಒಪ್ಪಿದ ಪರಿಣಾಮ ಮೈಸೂರು ರಾಜ್ಯವಾಯಿತು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಮಂಜುನಾಥ್ ತಿಳಿಸಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಅವರಣದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಭಾರತದಲ್ಲಿ ರಾಜ್ಯಗಳ ವಿಲೀನ ಪ್ರಕ್ರಿಯೆ 19ನೇ ಶತಮಾನದ ಮಧ್ಯಭಾಗದಲ್ಲಿ ಆರಂಭಗೊಂಡಿತು. ನಂತರ 1956ರಲ್ಲಿ ರಾಜ್ಯವು ಪುನರ್ವಿಂಗಡಣೆ ಕಾಯ್ದೆ ಜಾರಿಯೊಂದಿಗೆ ಈ ಪ್ರಕ್ರಿಯೆ ಮುಕ್ತಯವಾಯಿತು. ಕೂರ್ಗ್, ಮದರಾಸು, ಹೈದರಾಬಾದ್ ಮತ್ತು ಬಾಂಬೆ ಸಂಸ್ಥಾನದ ಕೆಲ ಪ್ರದೇಶಗಳು ಈ ಪ್ರಕ್ರಿಯೆಯಲ್ಲಿ ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟವು ಎಂದರು.
ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಹರಡಿದ್ದ ಕನ್ನಡ ಭಾಷಿಕರ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವು 1956ರಲ್ಲಿ ಅಸ್ತಿತ್ವಕ್ಕೆ ಬಂದಿತು. ಕರ್ನಾಟಕ ಹುಟ್ಟಿಗೆ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳವಳಿಯನ್ನು ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭಿಸಿದರು. ನಂತರ ಭಾರತಕ್ಕೆ ಸ್ವಾತಂತ್ರೃ ದೊರೆತು ಗಣರಾಜ್ಯವಾಯಿತು ಎಂದರು.
ಪಪಂ ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾರಾಮು, ಸದಸ್ಯರಾದ ಶ್ರೀನಿವಾಸ್, ಶಿವಕುಮಾರ್, ನೂರಳಾಸ್ವಾಮಿ, ಚಲುವಕೃಷ್ಣ, ಸಣ್ಣತಾಯಮ್ಮ, ಚೈತ್ರಾ ಸ್ವಾಮಿ, ದಿವ್ಯಾ ನವೀನ್, ಸಿಬ್ಬಂದಿ ಪಳಿನಿಸ್ವಾಮಿ, ಮಹದೇವಸ್ವಾಮಿ, ಅರ್ಜುನ್, ಶಿವಪ್ರಸಾದ್, ಅರುಣ್, ಸತೀಶ್, ದಿನೇಶ್, ರಂಜಿನಿ, ಮುಖಂಡರಾದ ಪುಟ್ಟ ಹನುಮಯ್ಯ, ಜೋಗಪ್ಪ ಇತರರಿದ್ದರು.