ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಬಾಲಿವುಡ್ನಲ್ಲಿರುವ ನೆಪೋಟಿಸಂ ಬಗ್ಗೆ ಧೈರ್ಯವಾಗಿ ಮಾತನಾಡಿದ್ದ ನಟಿ ಕಂಗನಾ ರಣಾವತ್ ಇದೀಗ ಭಾರತದ ಯೋಧರ ಮೇಲೆ ದಾಳಿ ಮಾಡಿದ ಚೀನಾದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಭಾರತದ 20 ಯೋಧರನ್ನು ಹತ್ಯೆ ಮಾಡಿದ ಚೀನಾದ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಯುದ್ಧ ಸಾರೋಣ. ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಿ ಆತ್ಮನಿರ್ಭರ ಅಭಿಯಾನ ಶುರುಮಾಡೋಣ ಎಂದಿದ್ದಾರೆ.
ಕ್ವೀನ್ ನಟಿ ಕಂಗನಾ ಚೀನಾ ವಿರುದ್ಧ ಮಾತನಾಡಿರುವ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ನಾವೆಲ್ಲರೂ ಒಂದಾಗಿ ಚೀನಾ ವಿರುದ್ಧ ಹೋರಾಟ ಮಾಡಬೇಕು. ಸೈನಿಕರು ಮತ್ತು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ.
ಒಂದೊಮ್ಮೆ ಯಾರಾದರೂ ನಮ್ಮ ಕೈಯಿಂದ ಒಂದು ಬೆರಳನ್ನು ಬೇರ್ಪಡಿಸಲು ಅಥವಾ ತೋಳಿನಿಂದ ಒಂದು ಕೈಯನ್ನು ಕತ್ತರಿಸಿಕೊಳ್ಳಲು ಪ್ರಯತ್ನಿಸಿದರೆ ಎಷ್ಟು ನೋವಾಗುತ್ತದೆಯೋ ಅಷ್ಟೇ ನೋವು, ಚೀನಾ ಲಡಾಖ್ನಲ್ಲಿ ಭಾರತದ ಭೂಪ್ರದೇಶವನ್ನು ಕಬಳಿಸಲು ಪ್ರಯತ್ನಿಸಿದಾಗ ಉಂಟಾಗುತ್ತದೆ. ನಮ್ಮ ಸೇನೆಯ 20 ಯೋಧರು ನಮ್ಮ ಭೂಮಿಗಾಗಿ ಪ್ರಾಣ ಅರ್ಪಿಸಿದ್ದಾರೆ. ಲಡಾಖ್ನಲ್ಲಿ ಒಂದು ಇಂಚೂ ಚೀನಾದ ಪಾಲಾಗಲು ಬಿಡುತ್ತಿಲ್ಲ. ಗಡಿಯಲ್ಲಿ ಉಂಟಾಗಿರುವ ಭಾರತ-ಚೀನಾ ಸಂಘರ್ಷ ಕೇಂದ್ರ ಸರ್ಕಾರ ಮತ್ತು ಮಿಲಿಟರಿಗೆ ಮಾತ್ರ ಸಂಬಂಧಪಟ್ಟಿದ್ದು ಎಂದು ಹೇಳುವುದು ತುಂಬ ಸುಲಭ. ಆದರೆ ನಮ್ಮನಿಮ್ಮಂತಹ ಸಾಮಾನ್ಯ ಜನರೂ ಇದರಲ್ಲಿ ಭಾಗಿಯಾಗಬೇಕು. ಅವರ ಹೋರಾಟಕ್ಕೆ ನಮ್ಮದೂ ಸ್ವಲ್ಪ ಕೊಡುಗೆ ನೀಡಬೇಕು ಎಂದಿದ್ದಾರೆ.
ನಮ್ಮ ದೇಶವನ್ನು ಬ್ರಿಟಿಷರು ಆಳುತ್ತಿದ್ದಾಗ ಅವರ ದಬ್ಬಾಳಿಕೆಯನ್ನು ಕೊನೆಗಾಣಿಸಲು ಬ್ರಿಟಿಷ್ ವಸ್ತುಗಳನ್ನು ಬಹಿಷ್ಕರಿಸುವಂತೆ ಮಹಾತ್ಮ ಗಾಂಧೀಜಿ ಜನರಿಗೆ ಕರೆ ಕೊಟ್ಟಿದ್ದರು. ಇದೇ ದಾರಿಯನ್ನು ನಾವೀಗ ಅನುಸರಿಸಬೇಕು. ಲಡಾಖ್ನ್ನು ನಮ್ಮಲ್ಲೇ ಉಳಿಸಿಕೊಳ್ಳಲು ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಮುಂದಾಗಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್ ಆಗಿದೆ
ನಾವೆಲ್ಲ ಆತ್ಮ ನಿರ್ಭರ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಬೇಕು. ನಮ್ಮ ದೇಶದ ಗೆಲುವು ಆದ್ಯತೆಯಾಗಬೇಕು. ಭಾರತ-ಚೀನಾ ನಡುವಿನ ಯುದ್ಧದಲ್ಲಿ ನಾವೂ ಕೂಡ ಪಾಲ್ಗೊಳ್ಳಬೇಕು..ಜೈ ಹಿಂದ್ ಎಂದು ಹೇಳಿದ್ದಾರೆ.
ಜೂ.15ರಂದು ಚೀನಾ ದಾಳಿಯಲ್ಲಿ ಮಡಿದ ಸೈನಿಕರಿಗೆ ಕಂಗನಾ ಶ್ರದ್ಧಾಂಜಲಿ ಸಲ್ಲಿಸಿದ್ದರು. ಅವರೆಲ್ಲರ ಹೆಸರುಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಸಂತಾಪ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್)
ಒಂದೇ ದಿನ 15 ಮಂದಿಗೆ ಪಾಸಿಟಿವ್ ; ತುಮಕೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆ