ಕನಕಗಿರಿ: ಇಲ್ಲಿನ ಬಿಜೆಪಿ ಮಂಡಲದಲ್ಲಿ ಒಬ್ಬರಿಲೊಬ್ಬರು ರಾಜೀನಾಮೆ ನೀಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಮಂಡಲ ಕಾರ್ಯದರ್ಶಿ ವಿರುಪಣ್ಣ ಕಲ್ಲೂರು ರಾಜೀನಾಮೆ ನೀಡಿದ್ದರು. ಈಗ ಎಸ್ಟಿ ಮೋರ್ಚಾ ಉಪಾಧ್ಯಕ್ಷ ವೆಂಕಟೇಶ್ ನಾಯಕ ಹಾಗೂ ಯುವ ಮೋರ್ಚಾ ಅಧ್ಯಕ್ಷ ಚೇತನ್ ಕುಮಾರ್ ಶ್ರೇಷ್ಟಿ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಮಂಡಲ ಅಧ್ಯಕ್ಷರಿಗೆ ಸಲ್ಲಿಸಿದ ರಾಜೀನಾಮೆ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಅಸಮಾಧಾನ ಹೆಚ್ಚಾಗುತ್ತಿದೆ. ಕ್ಷೇತ್ರದ ಶಾಸಕರ ಕಾರ್ಯವೈಖರಿ ಹಾಗೂ ಕಾರ್ಯಕರ್ತರಿಗೆ ಬೆಲೆ ಇಲ್ಲದ ಪಕ್ಷದಲ್ಲಿರಲು ಬಯಸದೆ ರಾಜೀನಾಮೆಗೆ ಮುಂದಾಗುತ್ತಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಬಿಜೆಪಿ ನಾಯಕರು ಹಳೇ ಮೈಸೂರು ಭಾಗದಲ್ಲಿ ನಾನಾ ಕಾರ್ಯಕ್ರಮ ರೂಪಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರೆ ಕನಕಗಿರಿ ಬಿಜೆಪಿ ಮಂಡಲದಲ್ಲಿ ಅಸಮಾಧಾನ ಹೆಚ್ಚಾಗಿ ಒಬ್ಬರ ನಂತರ ಒಬ್ಬರು ರಾಜೀನಾಮೆ ಸಲ್ಲಿಸುತ್ತಿರುವುದು ಕಾಂಗ್ರೆಸ್ನವರಿಗೆ ಅಸ್ತ್ರವಾಗಿ ಪರಿಣಮಿಸಿದೆ.