ಗಂಗಾವತಿ: ಅಂಗವಿಕಲರಿಗೆ ಪೂರಕವಾದ ಯೋಜನೆ ಮತ್ತು ಕಾಯ್ದೆಗಳನ್ನು ಸಮರ್ಪಕ ಅನುಷ್ಠಾನಗೊಳ್ಳಬೇಕಿದ್ದು, ಅರಿವು ಮುಖ್ಯವಾಗಿದೆ ಎಂದು ಜೆಎಂಎ್ಸಿ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ ಹೇಳಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾನೂನು ಅರಿವಿನಿಂದ ಪ್ರತಿಯೊಂದು ಹಕ್ಕುಗಳನ್ನು ಪಡೆಯಬಹುದಾಗಿದ್ದು, ಅಂಗವಿಕಲರಿಗಾಗಿ ಮೀಸಲಾದ ಕಾಯ್ದೆಗಳ ಮಾಹಿತಿ ಪಡೆಯಬೇಕು. ರಕ್ಷಣೆಗಾಗಿ ಪೊಲೀಸ್ ಇಲಾಖೆ ನೆರವು ಪಡೆಯಬೇಕಿದ್ದು, ಸಂಘಟಿತವಾಗಿ ಹಕ್ಕುಗಳನ್ನು ಪಡೆಯಬೇಕು. ಯೋಜನೆಗಳ ಸದ್ಬಳಕೆ ಮತ್ತು ಅನುಷ್ಠಾನ ಅಧಿಕಾರಿಗಳ ಕರ್ತವ್ಯ ಕುರಿತು ಕಾರ್ಯಾಗಾರದ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದರು.
ಅಂಗವಿಕಲರಿಗಾಗಿ ಮೀಸಲು ಯೋಜನೆ, ಹಕ್ಕುಗಳು ಮತ್ತು ಅನುಷ್ಠಾನ ಕುರಿತು ಸಿಡಿಪಿಒ ಪ್ರವೀಣಕುಮಾರ ಹೇರೂರು ಮಾಹಿತಿ ನೀಡಿದರು.
ತಾಪಂ ಇಒ ಲಕ್ಷ್ಮೀದೇವಿ ಯಾದವ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಸ್.ಎನ್.ಶ್ರೀದೇವಿ, ಬಿಇಒ ವೆಂಕಟೇಶ ರಾಮಚಂದ್ರಪ್ಪ, ಅಂಗವಿಕಲರ ಪುರ್ನವಸತಿ ಕಾರ್ಯಕರ್ತೆ ಮಂಜುಳಾ ಪುರಾಣಿಕ ಮಠ, ಅಂಗವಿಕಲರ ಒಕ್ಕೂಟದ ಪದಾಧಿಕಾರಿಗಳಾದ ಮಂಜುನಾಥ ಹೊಸ್ಕೇರಾ, ಹುಲುಗಪ್ಪ ಕಾಗೇರಿ ಇತರರಿದ್ದರು.