More

    ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್, ಬಿಜೆಪಿ ಫೋಬಿಯಾ 

    ಬೆಂಗಳೂರು: ಒಂದೆಡೆ ಆದಾಯ ತೆರಿಗೆಯವರಿಗೆ ಎಸ್‌ಎಸ್‌ಟಿ/ವೈಎಸ್‌ಟಿ ಬಾಬ್ತುಗಳ ಕಂತೆ ಕಂತೆ ಹಣ ಸಿಕ್ಕಿದೆ. ಸಿಎಂ, ಡಿಸಿಎಂ ಪಟಾಲಂ ಪರಿಶ್ರಮದಿಂದ ಬಾಚಿದ್ದ ಪಾಪದ ಹಣ ಕೈ ತಪ್ಪಿದೆ ಎಂದು ಜೆಡಿಎಸ್ ಲೇವಡಿ ಮಾಡಿದೆ.

    ಐಟಿ, ಇಡಿ ಕುಣಿಕೆ ಯಾರಿಗೆಲ್ಲ ಬಿಗಿದುಕೊಳ್ಳಲಿದೆಯೋ ಗೊತ್ತಿಲ್ಲ. ಸಾಹುಕಾರ ಸಿವಕುಮಾರ ಸುಲ್ತಾನನಿಗೂ ಸಿಬಿಐ ಸಿಕ್ಕು ಬಿದ್ದಿದೆ. ಕಾಂಗ್ರೆಸ್ ಸರ್ಕಾರಕ್ಕೆ 5 ತಿಂಗಳು ತುಂಬುವ ಮೊದಲೇ ಬೆಳಗಾವಿ ಜ್ವಾಲೆ ಭುಗಿಲೆದ್ದಿದೆ. ಅಂತಃಪುರದ ಕಲಹ ಹಾದಿಬೀದಿಗಳಲ್ಲಿ ಮೂರು ಕಾಸಿಗೆ ಬಿಕರಿಯಾಗುತ್ತಿದೆ. ಇನ್ನು ಕಕ್ಕಿಕೊಳ್ಳುವುದು ಬಿಟ್ಟರೆ ಇನ್ನೇನಿದೆ? ಎಂದು ಜೆಡಿಎಸ್ ಟಾಂಗ್ ಕೊಟ್ಟಿದೆ. ಕಾಂಗ್ರೆಸ್ ವಕ್ರರೇಖೆಗಳ ಹೊಲಸುಗುಚ್ಛ!! ಅಷ್ಟಾವಕ್ರನ ಅಪರಾವತಾರಿ. ನಾಮ, ಪಂಗನಾಮ, ಉಂಡೆನಾಮಗಳೆಲ್ಲ ಅದರ ಆಜನ್ಮ ಆಸ್ತಿ. ಕೊಳಕು ಮಂಡಲ, ಬಚ್ಚಲು ಬಾಯಿ ಎಂದರೆ ಅದು ಕಾಂಗ್ರೆಸ್ಸೇ. ಪರರ ಹಂಗಿನಲ್ಲಿಯೆ ಬದುಕುವ ಪರಾವಲಂಬಿ! ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

    ಆಶ್ರಯ, ಅನ್ನ ಕೊಟ್ಟ ಪಕ್ಷಕ್ಕೇ ಕನ್ನ ಕೊರೆಯುವ, ಉಂಡ ಮನೆಗೇ ಎರಡನ್ನು ಬಗೆಯುವ ಮೀರ್ ಸಾದಿಕರ ಆಡಂಬೋಲವೇ ಕಾಂಗ್ರೆಸ್. 75 ವರ್ಷದ ಈ ಪರದೇಸಿ ಪಕ್ಷದ್ದು ಸಮಾಜವಾದ, ಸಮತಾವಾದ, ಪ್ರಜಾಪ್ರಭುತ್ವವಾದ ಅಲ್ಲ, ಅದರದ್ದೇನಿದ್ದರೂ ’ಮೀರುಸಾದಿಕವಾದ! ಎಂದು ಜೆಡಿಎಸ್ ಮೂದಲಿಸಿದೆ.

    ಟೂಲ್ ಕಿಟ್ ಕಾರ್ಯಗಾರ ಎಲ್ಲಿದೆ?

    ಜಾತ್ಯತೀತತೆ ತನ್ನದೇ ಗುತ್ತಿಗೆ ಎಂದು ಕರ್ಣಕಠೋರ ಸುಳ್ಳು ಹೇಳುತ್ತಾ ಅದನ್ನು ಬಿಹಾರದ ನಿತೀಶ್ ಕುಮಾರ್ ಅವರ ಮನೆ ಹಿತ್ತಲಲ್ಲಿ ಹೂತು ಸಮಾಧಿ ಮಾಡಿದೆ ಕಾಂಗ್ರೆಸ್. ಈಗ ಜಾತಿ-ಜಾತಿ ಎನ್ನುತ್ತಾ ಜಾತಿಗಣಿತ ಎಂಬ ಅಪಾಯಕಾರಿ ಆಟ ಆರಂಭಿಸಿ ಚುನಾವಣೆಗೆ ಮುನ್ನವೇ ಟೂಲ್ ಕಿಟ್ ರೆಡಿ ಮಾಡಿಟ್ಟಿದೆ. ಈ ದುಷ್ಟ ಟೂಲುಕಿಟ್ಟಿನ ಕಿರಾತಕ ಕಾರ್ಯಾಗಾರ ಇಟಲಿಯಲ್ಲಿದೆಯೋ ಅಥವಾ ಲುಲೂ ಮಾಲಿನ ಮೇಲಿದೆಯೋ? ಎಂದು ಜೆಡಿಎಸ್ ಪ್ರಶ್ನಿಸಿದೆ.

    ಪಕ್ಷಕ್ಕೆ ಚಟ್ಟ ಕಟ್ಟಿದವರೇ ಸಿಎಂ!

    ಕುಮಾರಸ್ವಾಮಿ ಅವರನ್ನು ವಚನ ಭ್ರಷ್ಟರು ಎನ್ನುತ್ತೀರಿ. ಮೈತ್ರಿ ಸರ್ಕಾರ ತೆಗೆದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೇ ಒಳಏಟು ಕೊಟ್ಟ ಸಿದ್ದಪುರುಷರನ್ನೇ ಸಿಎಂ ಮಾಡಿಕೊಂಡಿದ್ದೀರಿ. ಈ ರಾಜಕಾರಣಕ್ಕೆ ಏನೆಂದು ಹೇಳಬೇಕು? ಎಂದು ಜೆಡಿಎಸ್ ಪ್ರಶ್ನಿಸಿದೆ.

    ಕಾಂಗ್ರೆಸ್ ಜಿನ್ನಾ ಜೀನ್ಸಿನ ಪಕ್ಷ

    ಜಿನ್ನಾ ಜೀನ್ಸಿನ ಕಾಂಗ್ರೆಸ್‌ಗೆ ಜೆಡಿಎಸ್, ಬಿಜೆಪಿ ಫೋಬಿಯಾ ಶುರುವಾಗಿದೆ. ಅದಕ್ಕೆ ಹೊಸ ಟೂಲ್ ಕಿಟ್‌ಗಳ ಆವಿಷ್ಕಾರದಲ್ಲಿ ತೊಡಗಿದೆ. ಅಂಗಿ ಹರಿದುಕೊಂಡು, ರಾತ್ರಿ ವೇಳೆ ತೂರಾಡಿಕೊಂಡು ಯಾರು ಓಡಾಡುತ್ತಿದ್ದಾರೆ ಎನ್ನುವುದನ್ನು ಮಾಧ್ಯಮಗಳೇ ತೋರಿಸಿವೆ. ಕೆಲ ದಿನ ಕಾಯಿರಿ, ಅಂಗಿ ಹರಿದುಕೊಳ್ಳುವ ಸ್ಥಿತಿ ಯಾರಿಗೆ ಕಾದಿದೆಯೋ ನೋಡೋಣ. 135 ಶಾಸಕರಿದ್ದಾರೆ ಎಂದು ಬೀಗಿದ್ದೇ ಬಂತು. ಈಗ ಒಂದು ಪಾರ್ಟಿ, ಹತ್ತಾರು ಬಣ ಎನ್ನುವ ಕಾಂಗ್ರೆಸ್ ನ ಬುಡವೇ ಬಿದ್ದುಹೋಗುವ ಪರಿಸ್ಥಿತಿ ಸೃಷ್ಟಿ ಆಗುತ್ತಿದೆ. ಹತಾಶೆ, ಮತಿಭ್ರಮಣೆ ಯಾರಿಗೆ? ಅರ್ಥವಾಗದಷ್ಟು ಅಜ್ಞಾನವೇ ನಿಮಗೆ? ಎಂದು ಜೆಡಿಎಸ್ ಕೆಣಕಿದೆ.

    ಒಕ್ಕಲಿಗರ ವಿರುದ್ಧ ಕಾಂಗ್ರೆಸ್ ದುಷ್ಟ ಹುನ್ನಾರ

    ಜಾತ್ಯತೀತ ಎನ್ನುತ್ತ ಒಕ್ಕಲಿಗರನ್ನು ಎತ್ತಿಕಟ್ಟುವ ನೀಚ ಪ್ರಯತ್ನಕ್ಕೂ ಕಾಂಗ್ರೆಸ್ ಕೈ ಹಾಕಿದೆ. ಒಕ್ಕಲಿಗರು ಹೀನ ಸಂಸ್ಕೃತಿಯುಳ್ಳವರು, ಸಂಸ್ಕೃತಿಹೀನರು ಎನ್ನುವ ಕೊಳಕು ಹೇಳಿಕೆ ಹಿಂದೆ ಇದೇ ಕಾಂಗ್ರೆಸ್ಸಿನ ಟೂಲ್ ಕಿಟ್ ಷಡ್ಯಂತ್ರ ಅಡಗಿದೆ ಎಂದು ಜೆಡಿಎಸ್ ಕಟುವಾಗಿ ಟೀಕಿಸಿದೆ.

    ಕಾಂಗ್ರೆಸ್‌ಗೆ ವಿರುದ್ಧ ಪದವೇ ನಿಯತ್ತು

    ಕಾಂಗ್ರೆಸ್ ಪಕ್ಷಕ್ಕೆ ಇರುವ ವಿರುದ್ಧ ಪದಗಳಲ್ಲಿ ನಿಯತ್ತು ಕೂಡ ಒಂದು. ನೀತಿ, ನಿಯತ್ತು ಎಂದರೆ ಅದಕ್ಕೆ ಗಾವುದ ದೂರ. ಚರಿತ್ರೆ ಬಿಚ್ಚಿಟ್ಟರೆ ಕಾಂಗ್ರೆಸ್ ಮುಖವೇ ಕೊಳಕುಮಂಡಲದಂತೆ ಮುದುಡಿಕೊಳ್ಳುತ್ತಿದೆ. ಎಷ್ಟೋ ಪ್ರಾದೇಶಿಕ ಪಕ್ಷಗಳನ್ನು ಹಸ್ತಪಕ್ಷ ಆಪೋಶನ ತೆಗುಕೊಂಡಿದ್ದೇ ಒಂದು ಅಮರಚಿತ್ರ ಕಥೆ. ಪರಕೀಯ ವಿಚಾರಧಾರೆ ಮೂಲಕ ಈಗಲೂ ಬ್ರಿಟಿಷ್ ಗುಲಾಮಿ ಮನಃಸ್ಥಿತಿಯಲ್ಲಿದೆ ಕಾಂಗ್ರೆಸ್. ದುರಂತಕ್ಕೆ ಈಗ ಇನ್ನೊಬ್ಬರ ಆತ್ಮಸಾಕ್ಷಿ ಬಗ್ಗೆ ಅಲವತ್ತುಕೊಳ್ಳುತ್ತಿದೆ ಎಂದು ಜೆಡಿಎಸ್ ಲೇವಡಿ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts