ಮೈಸೂರು: ಅಂತಾರಾಷ್ಟ್ರೀಯ ಕ್ರಿಕೆಟ್ಪಟು ಜಾವಗಲ್ ಶ್ರೀನಾಥ್, ಖ್ಯಾತ ಗಾಯಕ ನವೀನ್ ಸಜ್ಜು ಸೇರಿದಂತೆ ಹಲವು ಗಣ್ಯರು ಜನರಲ್ಲಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ಚುನಾವಣಾ ಆಯೋಗದೊಂದಿಗೆ ಕೈಜೋಡಿಸಿದ್ದಾರೆ.
ದೇಶದ ಭವಿಷ್ಯವನ್ನು ನಿರ್ಧರಿಸುವ ಲೋಕಸಭೆ ಚುನಾವಣೆ ರಾಜ್ಯದಲ್ಲಿ ಏ.26 ರಂದು ನಡೆಯಲಿದ್ದು, ಎಲ್ಲರು ತಪ್ಪದೆ ಮತದಾನ ಮಾಡಬೇಕು ಎಂದು ಜಾವಗಲ್ ಶ್ರೀನಾಥ್, ನವೀನ್ ಸಜ್ಜು ಹಾಗೂ ಜಿಲ್ಲೆಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ಕರೆ ನೀಡಿರುವ ವಿಡಿಯೋಗಳನ್ನು ಚುನಾವಣಾ ಆಯೋಗ ಹಂಚಿಕೊಂಡಿದೆ. ಮೈಸೂರು ಅರಮನೆ ಹಾಗೂ ಸುತ್ತಮುತ್ತ ಮತದಾನ ಜಾಗೃತಿ ವಿಡಿಯೋ ವನ್ನು ಚಿತ್ರೀಕರಣ ಮಾಡಲಾಗಿದೆ.
‘ದೇಶದ ಹಿತದೃಷ್ಟಿಗಾಗಿ ಮತ ಚಲಾಯಿಸಿ, ನನ್ನ ದೇಶ ನನ್ನ ಹೆಮ್ಮೆ, ಮತ ಚಲಾಯಿಸುವುದನ್ನು ಮರೆಯಬೇಡಿ’ ಎಂದು ಜಾವಗಲ್ ಶ್ರೀನಾಥ್ ವಿಡಿಯೋ ಸಂದೇಶದ ಮೂಲಕ ಕರೆ ನೀಡಿದ್ದಾರೆ. ‘ಉತ್ತಮ ದೇಶಕ್ಕಾಗಿ ನನ್ನ ಮತ, ದಯವಿಟ್ಟು ಎಲ್ಲರು ಮತ ಚಲಾಯಿಸಿ’ ಎಂದು ನವೀನ್ ಸಜ್ಜು ಕರೆ ನೀಡಿದ್ದಾರೆ. ‘ನನ್ನ ಮತ ಅಮೂಲ್ಯವಾದದ್ದು’ ಎಂಬ ಸಂದೇಶವನ್ನು ನಗರದ ನಾಗರಿಕರಾದ ಜ್ಯೋತ್ಸ್ನಾ ನೀಡಿದ್ದಾರೆ. ‘ಮತದಾನ ಅನ್ನುವುದು ನಮ್ಮೆಲ್ಲರ ಜವಾಬ್ದಾರಿ ಅಷ್ಟೆ ಅಲ್ಲ, ನಮ್ಮೆಲ್ಲರ ಹಕ್ಕು ಹಾಗೂ ಭವಿಷ್ಯದ ಭರವಸೆ’ ಎಂದು ವಿದ್ಯಾರ್ಥಿ ಸಂದೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.