| ಸಿ.ಎ. ನಾರಾಯಣ ಭಟ್, ಆರ್ಥಿಕ ತಜ್ಞ
ಬೆಂಗಳೂರು: ಲಾಕ್ಡೌನ್ನಿಂದಾಗಿ ತೀರಾ ಸಂಕಷ್ಟಕ್ಕೆ ಸಿಲುಕಿರುವ ಕೃಷಿ ಕಾರ್ಮಿಕರು, ಜನ್ಧನ್ ಖಾತೆ ಹೊಂದಿರುವವರು ಹಾಗೂ ಬಿಪಿಎಲ್ ಕಾರ್ಡ್ದಾರರು ಮುಂದಿನ ಮೂರು ತಿಂಗಳು ನಿಶ್ಚಿಂತರಾಗಿ ಇರಬಹುದು. ಏಕೆಂದರೆ ಇವರಿಗೆ ಉಚಿತವಾಗಿ ವಿದ್ಯುತ್, ಉಚಿತ ಗ್ಯಾಸ್ ನೀಡಲಾಗುವುದು.
ಈಗಾಗಲೇ ಜನ್ಧನ್ ಖಾತೆದಾರರಿಗೆ ಕೇಂದ್ರ ಸರ್ಕಾರ ಕೆಲವೊಂದು ಸೌಲಭ್ಯಗಳನ್ನು ನೀಡುತ್ತಿದ್ದು, ಅವರಿಗೆ ಮುಂದಿನ ಮೂರು ತಿಂಗಳವರೆಗೆ ಎಲ್ಲಾ ಸೌಲಭ್ಯಗಳೂ ವಿಸ್ತರಣೆ ಆಗಲಿದೆ.
ಇದರ ಜತೆಗೆ ಜನ್ಧನ್ ಖಾತೆ ಹೊಂದಿರುವ ಮಹಿಳೆಯರಿಗೆ ಈಗಾಗಲೇ ಕೇಂದ್ರ ಸರ್ಕಾರ ಮಾಸಿಕ 500 ರೂಪಾಯಿಗಳ ಸಹಾಯಧನ ನೀಡುತ್ತಿದ್ದು, ಅದನ್ನು ಕೂಡ ವಿಸ್ತರಣೆ ಮಾಡಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದನ್ನೂ ಓದಿ: ಪ್ಯಾಕೇಜ್ನಲ್ಲಿ ತೆರಿಗೆ ಸುಧಾರಣೆ, ಟಿಡಿಎಸ್-ಟಿಸಿಎಸ್ನಲ್ಲಿ ಶೇ.25 ಕಡಿತ: ಹಣಕಾಸು ಸಚಿವೆ
ಇದರ ಜತೆಗೆ, ಕೃಷಿ ಕಾರ್ಮಿಕರು ಮುಂಬರುವ ಮೂರು ತಿಂಗಳವರೆಗೆ ಐದು ಕೆ.ಜಿ. ಅಕ್ಕಿ ಅಥವಾ ಗೋಧಿಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದರಿಂದ ಕೋಟ್ಯಂತರ ಬಡವರಿಗೆ ಅನುಕೂಲ ಆಗಲಿದೆ. ಇಷ್ಟೇ ಅಲ್ಲದೇ, ಮುಂದಿನ ಮೂರು ತಿಂಗಳು ಒಂದು ಕೆ.ಜಿ ಧವಸ ಧಾನ್ಯಗಳೂ ಉಚಿತವಾಗಿ ಸಿಗಲಿದೆ.
ಇನ್ನು ಕಿರು, ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಭಾರಿ ಕೊಡುಗೆ ಸರ್ಕಾರ ನೀಡಿದೆ. ಇವರು ಪಡೆಯುವ ಸಾಲಕ್ಕೆ ಸರ್ಕಾರವೇ ಭದ್ರತೆ ನೀಡಲಿದೆ. ಈ ಮೊದಲು ಮುದ್ರಾ ಯೋಜನೆ ಅಡಿ ಸರ್ಕಾರ ಉದ್ದಿಮೆದಾರರಿಗೆ ಸಾಲ ನೀಡುವಂತೆ ಹೇಳಿತ್ತು. ಆದರೆ ಸರ್ಕಾರದ ಭದ್ರತೆ ಇಲ್ಲದ ಹಿನ್ನೆಲೆಯಲ್ಲಿ, ಬ್ಯಾಂಕ್ಗಳು ಉದ್ದಿಮೆದಾರರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿದ್ದವು.
ಇದನ್ನೂ ಓದಿ: ಇಪಿಎಫ್ ಬಗ್ಗೆ ಚಿಂತೆ ಬೇಡ, ಇನ್ನೂ 3ತಿಂಗಳು ಕೇಂದ್ರವೇ ಪಾವತಿಸುತ್ತದೆ: ನಿರ್ಮಲಾ ಸೀತಾರಾಮನ್
ಇದನ್ನು ಗಮನಿಸಿ ಇದೀಗ, ಸರ್ಕಾರವೇ ಭದ್ರತೆ ಒದಗಿಸಲಿದೆ. ಇದರರ್ಥ ಒಂದು ವೇಳೆ ಸಾಲವನ್ನು ಮರುಪಾವತಿಸಲು ಉದ್ದಿಮೆದಾರರು ವಿಫಲರಾದರೆ ಸರ್ಕಾರವೇ ಅದನ್ನು ಭರಿಸಲಿದೆ. ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವುದು ಕೂಡ ಇಂಥ ಉದ್ದಿಮೆಗಳಲ್ಲೇ ಆಗಿರುವ ಹಿನ್ನೆಲೆಯಲ್ಲಿ, ಇದು ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಭಾರಿ ಕೊಡುಗೆ ಸಿಕ್ಕಂತಾಗಿದೆ.