ಜಗಳೂರು: ತಾಲೂಕಿನ ಕಲ್ಲೇದೇವರಪುರದಲ್ಲಿ ವರುಣ ಕೃಪೆಗೆ ಪ್ರಾರ್ಥಿಸಿ ಗುಲುಕಮ್ಮ ದೇವಿಗೆ ಗ್ರಾಮಸ್ಥರು ಸೋಮವಾರ ಪೂಜೆ ಸಲ್ಲಿಸಿದರು.
ಸೆಗಣಿಯಿಂದ ತಯಾರಿಸಿದ ಗುಲುಕಮ್ಮನ ಮೂರ್ತಿಯನ್ನು ಬಾಲಕನೊಬ್ಬನ ತಲೆ ಮೇಲೆ ಹೊತ್ತು ಊರ ತುಂಬ ಓಡಾಡುತ್ತಾನೆ. ಮನೆ ಬಾಗಿಲಿಗೆ ಬಂದ ಬಾಲಕನಿಗೆ ಹೆಂಗಳೆಯರು ತಲೆ ಮೇಲೆ ಒಂದು ತಂಬಿಗೆ ನೀರೆರೆದು ಪೂಜೆ ಸಲ್ಲಿಸಿ ಕಾಣಿಕೆ ರೂಪದಲ್ಲಿ ದವಸ, ಧಾನ್ಯ, ಹಣ ನೀಡುತ್ತಾರೆ.
ಹೀಗೆ ಸಂಗ್ರಹವಾದ ಧಾನ್ಯಗಳನ್ನು ಮಾರಿ ಸಜ್ಜೆ ಇಲ್ಲವೇ ಜೋಳ ಖರೀದಿಸಿ ಕಡುಬು ತಯಾರಿಸಲಾಗುತ್ತದೆ. ಸಂಜೆ ಊರ ಹೊರವಲಯದ ಹಳ್ಳದ ದಂಡೆ ಮೇಲೆ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿ ಕಡುಬಿನ ನೈವೇದ್ಯ ಅರ್ಪಿಸಲಾಗುತ್ತದೆ.
ಕಸಬಾ ಹೋಬಳಿಗೆ ಸೇರಿದ ಕಲ್ಲೇದೇವರಪುರ ಸುತ್ತಮುತ್ತಲ ಹಳ್ಳಿಗಳಲ್ಲಿ 15ದಿನಗಳಿಂದ ಮಳೆಯಾಗಿಲ್ಲ. ಬಿತ್ತನೆ ಮಾಡಿದ ಬೆಳೆ ಒಣಗಲಾರಂಭಿಸಿದೆ. ಬೆಳೆ ರಕ್ಷಿಸಿಕೊಳ್ಳಲು ಗುಲುಕಮ್ಮನ ಮೊರೆ ಹೋಗಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.