ಜೆರುಸಲೇಮ್: ಹಮಾಸ್ ವಿರುದ್ಧದ ಯುದ್ಧ ನಡುವೆಯೇ ಇಸ್ರೇಲ್ ಸರ್ಕಾರ ಒಂದು ಲಕ್ಷ ಭಾರತೀಯರಿಗೆ ಉದ್ಯೋಗ ನೀಡಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ಇಸ್ರೇಲಿ ಬಿಲ್ಡರ್ ಅಸೋಸಿಯೇಷನ್ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡುವಂತೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರ್ಕಾರದ ಮುಂದೆ ಬೇಡಿಕೆ ಇರಿಸಿದೆ.
ನಾವು ಪ್ರಸ್ತುತ ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಅದನ್ನು ಅನುಮೋದಿಸಲು ಇಸ್ರೇಲ್ ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. 50,000 ದಿಂದ 100,000 ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಆಶಿಸುತ್ತೇವೆ. ಇದು ನಿರ್ಮಾಣ ವಲಯವನ್ನು ನಡೆಸಲು ಮತ್ತು ಅದನ್ನು ಸಾಮಾನ್ಯ ಸ್ಥಿತಿಗೆ ತರಲು ಅನುವು ಮಾಡಿಕೊಡುತ್ತದೆ ಎಂದು ಇಸ್ರೇಲ್ ಬಿಲ್ಡರ್ಸ್ ಅಸೋಸಿಯೇಷನ್ ಉಪಾಧ್ಯ ಹೈಮ್ ಫೀಗ್ಲಿನ್ ತಿಳಿಸಿದ್ದಾರೆ. ಆದರೆ ಭಾರತದ ವಿದೇಶಾಂಗ ಸಚಿವಾಲಯ ಈ ವರದಿಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಾರ್ಮಿಕರ ಕೊರತೆ
ಇಸ್ರೇಲ್ನ ನಿರ್ಮಾಣ ಉದ್ಯಮ ಕ್ಷೇತ್ರದಲ್ಲಿರುವ ಶೇ. 25ರಷ್ಟು ಕಾರ್ಮಿಕರು ಪ್ಯಾಲೆಸ್ತೀನಿಯರು. ಹಮಾಸ್ ದಾಳಿಯ ನಂತರ ಪ್ಯಾಲೆಸ್ತೀನ್ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ ಅಥವಾ ಅವರಿಗೆ ಬರಲು ಇಸ್ರೇಲ್ ಸರ್ಕಾರ ಅನುಮತಿ ನೀಡುತ್ತಿಲ್ಲ. ಹೀಗಾಗಿ ಕಾರ್ಮಿಕರ ಕೊರತೆ ಎದುರಾಗಿದೆ.
ಪ್ಯಾಲೆಸ್ತೀನಿಯರ ಸ್ಥಾನಕ್ಕೆ ಭಾರತೀಯರು
ಯುದ್ಧದಿಂದಾಗಿ ಇಸ್ರೇಲ್ನ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ ಪ್ಯಾಲೆಸ್ತೀನಿಯರು ಕೆಲಸದ ಪರವಾನಿಗೆ ಕಳೆದುಕೊಂಡಿದ್ದಾರೆ. ಈ ಬೆಳವಣಿಗೆಯು ನಿರ್ಮಾಣ ವಲಯದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ನಿರ್ಮಾಣ ವಲಯದಲ್ಲಿ 90 ಸಾವಿರ ಕಾರ್ಮಿಕರ ಕೊರತೆ ದಾಖಲಾಗಿದೆ. ಕಾರ್ಮಿಕರಿಲ್ಲದ ಕಾರಣ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. 1 ಲ ಭಾರತೀಯ ಕಾರ್ಮಿಕರ ನೇಮಕಾತಿಯಿಂದ ಸ್ಥಗಿತಗೊಂಡಿರುವ ನಿರ್ಮಾಣ ಕಾರ್ಯಗಳನ್ನು ಪುನರಾರಂಭಿಸುವ ಚಿಂತನೆಯಾಗಿದೆ.
ಭಾರತ-ಇಸ್ರೇಲ್ ಒಪ್ಪಂದ
ಕಳೆದ ಮೇ ತಿಂಗಳಲ್ಲಿ ಇಸ್ರೇಲ್ ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಒಪ್ಪಂದದ ಪ್ರಕಾರ 42,000 ಭಾರತೀಯರಿಗೆ ಇಸ್ರೇಲ್ನಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ. ನರ್ಸಿಂಗ್ ಜತೆಗೆ ನಿರ್ಮಾಣ ವಲಯದಲ್ಲಿ ವಿಶೇಷವಾಗಿ ಭಾರತೀಯರನ್ನು ನೇಮಿಸಿಕೊಳ್ಳಬಹುದು.