ಶಿವಮೊಗ್ಗ: ನಗರ ಪಾಲಿಕೆಯಿಂದ ಆಯೋಜಿಸಿರುವ ದಸರಾದ ಜಂಬೂ ಸವಾರಿಗೆ ಸಕ್ರೆಬೈಲು ಬಿಡಾರದಿಂದ ಆಗಮಿಸಲಿರುವ ಮೂರು ಆನೆಗಳಿಗೆ ಮಂಗಳವಾರ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಆನೆಗಳನ್ನು ಕರೆತರುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದ ಪಾಲಿಕೆ ಸದಸ್ಯರ ತಂಡ ಮನವಿ ಮಾಡಿತು.
ಶಿವಮೊಗ್ಗಕ್ಕೆ ಆಗಮಿಸಲಿರುವ ಮೂರು ಆನೆಗಳಿಗೆ ಬಾಳೆಹಣ್ಣು, ಕಬ್ಬು ಹಾಗೂ ಸಿಹಿ ತಿನ್ನಿಸಿ, ಅವುಗಳಿಗೆ ಅಲಂಕಾರ ಮಾಡಿ ಪುಷ್ಪಾರ್ಚನೆಗೈದು ಆರತಿ ಬೆಳಗಿ ಪೂಜೆ ಸಲ್ಲಿಸಲಾಯಿತು. ಪಾಲಿಕೆಯ ಮಹಿಳಾ ಸದಸ್ಯರು ಆನೆಗಳಿಗೆ ಅರಿಶಿಣ ಕುಂಕುಮ ಹಚ್ಚಿ ನಮನ ಸಲ್ಲಿಸಿದರು. ಮೆರವಣಿಗೆಗೆ ಆಗಮಿಸುವಂತೆ ಪಾಲಿಕೆ ವತಿಯಿಂದ ಆನೆಗಳಿಗೆ, ಕಾವಾಡಿಗರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಧಿಕೃತವಾಗಿ ಆಮಂತ್ರಣ ನೀಡಲಾಯಿತು.
ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀಶಂಕರ ನಾಯ್ಕ, ವನ್ಯಜೀವಿ ವಿಭಾಗದ ಡಿಸಿಎ್ ಪ್ರಸನ್ನಕೃಷ್ಣ ಪಟಗಾರ್, ವನ್ಯಜೀವಿ ವಿಭಾಗದ ವೈದ್ಯ ಡಾ. ವಿನಯ್, ಉತ್ಸವ ಸಮಿತಿಯ ಅಧ್ಯಕ್ಷ ಯು.ಎಚ್.ವಿಶ್ವನಾಥ್ ಹಾಗೂ ಪಾಲಿಕೆಯ ಸದಸ್ಯರು ಈ ಸಂದರ್ಭದಲ್ಲಿದ್ದರು.
ಎಂದಿನಂತೆ ಈ ಬಾರಿಯೂ 38 ವರ್ಷದ ಸುಮಾರು 3,500 ಕೆಜಿ ತೂಕದ ಸಾಗರ್ ಅಂಬಾರಿ ಹೊರಲಿದ್ದಾನೆ. ಆತನಿಗೆ ಹೇಮಾವತಿ ಹಾಗೂ ನೇತ್ರಾವತಿ ಸಾಥ್ ನೀಡಲಿದ್ದಾರೆ. ಬಿಡಾರದ ಕಿರಿಯ ಆನೆಗಳಲ್ಲೊಂದಾದ 1,700 ಕೆಜಿ ತೂಕ ಹಾಗೂ 9 ವರ್ಷದ ಹೇಮಾವತಿ, 2,250 ಕೆಜಿ ಭಾರದ 25 ವರ್ಷದ ನೇತ್ರಾವತಿ ಮೆರವಣಿಗೆಯಲ್ಲಿ ಸಾಗರ್ ಜತೆಗೆ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿವೆ.