ಬೇಲೂರು: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣಕ್ಕೆ ಕ್ಷೇತ್ರದ ಜನರು ಸಾಕ್ಷಿಯಾಗುವ ಮೂಲಕ ಇತಿಹಾಸ ನಿರ್ಮಿಸಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಮನವಿ ಮಾಡಿದರು.
ಪಟ್ಟಣದ ಶ್ರೀ ಶಂಕರ ಮಠದಲ್ಲಿ ಬುಧವಾರ ಗುರುಗಳ ದರ್ಶನ ಪಡೆದು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ದೇಗುಲ ಸಮೀಪದ ಬಯಲು ರಂಗಮಂದಿರದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ವಿವಿಧ ಸಮುದಾಯದವರ ಸಹಕಾರದೊಂದಿಗೆ ರಾಮತಾರಕ ಜಪತಪ, ಹೋಮಹವನ, ಕಾರ್ಯಕ್ರಮ ವೀಕ್ಷಿಸಲು ಎಲ್ಇಡಿ ಸ್ಕ್ರೀನ್ ಅಳವಡಿಸಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಂತೆ ಅಂದು ಎಲ್ಲರೂ ತಮ್ಮ ಮನೆ ಮುಂದೆ ಸೂರ್ಯ ಮುಳುಗಿದ ನಂತರ ದೀಪ ಹಚ್ಚಿ ನಿಜವಾದ ದೀಪಾವಳಿ ಆಚರಿಸಬೇಕು. ತಾಲೂಕಿನ ಎಲ್ಲ ದೇಗುಲಗಳಲ್ಲೂ ಪೂಜೆ, ಅಭಿಷೇಕ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗವಿರುತ್ತದೆ. ಬೇಲೂರಿನಲ್ಲಿ ಇತಿಹಾಸ ದೇಗುಲ ಇರುವುದರಿಂದ ಇಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸುತ್ತಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದರು.
ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿಜಯ ಕೇಶವ ಮಾತನಾಡಿ, ಅಯೋಧ್ಯೆಯಲ್ಲಿ ಜುರುಗಲಿರುವ ಆ ದಿನದ ಐತಿಹಾಸಿಕ ಕ್ಷಣಕ್ಕೆ ಬೇಲೂರಿನ ಶ್ರೀರಾಮ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಬೇಕು ಎಂದರು.
ಕೆ.ಆರ್.ಮಂಜುನಾಥ್, ತೊ.ಚ.ನರಸಿಂಹಮೂರ್ತಿ, ಶಂಕರ ಮಠದ ಅಧ್ಯಕ್ಷ ಆರ್.ಸುಬ್ರಹ್ಮಣ್ಯ, ಬಿಜೆಪಿ ಮುಖಂಡ ಪ್ರಕಾಶ್, ಮುರಳಿ, ಸುರೇಶ್, ರಮೇಶ್, ವೇಣುಗೋಪಾಲ್ ಶ್ರೀಹರಿ ಇತರರಿದ್ದರು.