ಹಾಥರಸ್: ಉತ್ತರ ಪ್ರದೇಶದ ಹಾಥರಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರನ್ನು ಮಾತನಾಡಿಸಲು ಹೋಗಿದ್ದ ಆಮ್ ಆದ್ಮಿ ಪಕ್ಷದ ಮುಖಂಡರಿಗೆ ಮುಖಭಂಗ ಆಗಿದೆ.
ಪಕ್ಷದ ದೆಹಲಿ ಮುಖಂಡರಾದ ರಾಖಿ ಬಿರ್ಲಾ ಹಾಗೂ ಅಜಯ್ ದತ್ ಅವರೊಂದಿಗೆ ಆಪ್ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮಾಧ್ಯಮದವರ ಜತೆ ಮಾತನಾಡುತ್ತಿದ್ದಾಗ ಅವರ ಮುಖಕ್ಕೆ ಕಿಡಿಗೇಡಿಗಳು ಶಾಯಿ ಎಸೆದಿದ್ದಾರೆ.
ಸಂತ್ರಸ್ತೆಯ ಮನೆಗೆ ನಮ್ಮನ್ನು ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯಲಾಗಿತ್ತು. ಆದರೆ ನಾವು ವಾಪಸ್ ಬರುವಾಗ ಈ ರೀತಿ ಆಗಿದೆ. ಹಾಥರಸ್ನಲ್ಲಿ ಇದು ಹೇಡಿತನದ ಕೆಲಸ ಎಂದಿರುವ ಆಪ್ ಮುಖಂಡರು, ಯೋಗಿ ಸರ್ಕಾರ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಸಂತ್ರಸ್ತೆಯ ಪರ ದನಿ ಎತ್ತುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಮಸಿ ಎರಚುವ ಮೂಲಕ ಯೋಗಿ ಆದಿತ್ಯನಾಥ್ ಸರ್ಕಾರ ಹೇಡಿತನವನ್ನು ಸಾಬೀತುಪಡಿಸಿದೆ ಎಂದು ಆಪ್ ವಕ್ತಾರ ರಾಘವ್ ಚಡ್ಡಾ ಹೇಳಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ದುರ್ವರ್ತನೆಗೆ ಇದೇ ಸಾಕ್ಷಿ ಎಂದು ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ. (ಏಜೆನ್ಸೀಸ್)