ಹೊಸಪೇಟೆ: ರಾಜ್ಯ ಸರ್ಕಾರದ ಗ್ಯಾರೆಂಟಿಗಳ ಹೆಸರಲ್ಲಿ ಉಚಿತ ಯೋಜನೆಗಳನ್ನು ಕೊಡಬಾರದು ಎನ್ನುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿಗೆ ಬಡವರ ಕಷ್ಟ, ಹಸಿವು ಗೊತ್ತಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ತಿರುಗೇಟು ನೀಡಿದರು.
ಛಲವಾದಿ ಮಹಾಸಭಾ ರಾಜ್ಯ ಮತ್ತು ಜಿಲ್ಲಾ ಘಟಕದಿಂದ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಈ ಹಿಂದೆ ಕೆಲ ಉದ್ಯಮಿಗಳಿಗೆ ೧ ಲಕ್ಷ ರೂ. ವರೆಗೆ ಸರ್ಕಾರದಿಂದ ಸಾಲ ಮನ್ನ ಮಾಡಲಾಗಿದೆ. ಅದಕ್ಕೆ ಯಾರೊಬ್ಬರೂ ಆಕ್ಷೇಪಿಸಲಿಲ್ಲ. ಈಗ ಬಡವರಿಗೆ ಉಚಿತ ಕೊಡುಗೆಗಳನ್ನು ನೀಡುವಾಗ ಕಣ್ಣು ಕೆಂಪಾಗಿಸುವುದೇಕೆ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಇಂತಹ ಯಾವುದೇ ಒತ್ತಡಗಳಗೆ ಸೊಪ್ಪು ಹಾಕುವುದಿಲ್ಲ. ಗ್ಯಾರೆಂಟಿ ಯೋಜನೆಗಳಿಂದ ೧.೩೨ ಕೋಟಿ ಮಹಿಳೆಯರಿಗೆ ಮಾಸಿಕ ನಾಲ್ಕು ಸಾವಿರ ರೂ. ಬರುತ್ತಿದ್ದು, ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಿದರು.
ಹಾವೇರಿ ಮಾಜಿ ಶಾಸಕ ನೆಹರೂ ಚ. ಓಲೆಕಾರ ಮಾತನಾಡಿ, ರಾಜ್ಯದಲ್ಲಿ ಒನಕೆ ಓಬವ್ವ ಸ್ಮರಣಾರ್ಥ ಮಹಿಳಾ ಸೈನಿಕ ಶಾಲೆ ಆರಂಭಿಸಬೇಕು. ಅಂಬೇಡ್ಕರ್ ಅವರ ೧೬೦ ಅಡಿ ಎತ್ತರದ ಪ್ರತಿಮೆ ಸ್ಥಾಪಿಸಬೇಕು. ಅಂಬೇಡ್ಕರ್ ಟ್ರಸ್ಟ್ಗೆ ಒಂದು ಸಾವಿರ ಎಕರೆ ನೀಡಬೇಕು. ಈ ಮೂಲಕ ಬಾಬಾ ಸಾಹೇಬ ವಿಚಾರಧಾರೆ ಪ್ರಸಾರದಲ್ಲಿ ಕರ್ನಾಟಕ ಮಾದರಿರಾಜ್ಯವಾಗಬೇಕು ಎಂದು ಒತ್ತಾಯಿಸಿದರು.
ವೇದಿಕೆ ಮೇಲೆ ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯ, ಚಿನ್ನಸ್ವಮಿ ಸೋಸಲೆ, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ, ಶಿರಾಜ್ ಶೇಖ್, ಎಚ್.ಎನ್.ಎಫ್ ಇಮಾಮ್ ನಿಯಾಜ್, ಬಣ್ಣದ ಮನೆ ಸೋಮಶೇಖರ್ ಇದ್ದರು.