ರಾಣೆಬೆನ್ನೂರ: ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೇಳಿದ್ದಾನೆಂದು ಕರೊನಾ ಕೇರ್ ಸೆಂಟರ್ನಲ್ಲಿದ್ದ ಇಬ್ಬರು ಸೋಂಕಿತರನ್ನು ಅವಧಿಗೂ ಮೊದಲೇ ಸಿಬ್ಬಂದಿ ಬಿಡುಗಡೆ ಮಾಡಿರುವ ಘಟನೆ ಇಲ್ಲಿಯ ಹಲಗೇರಿ ರಸ್ತೆಯ ಎಸ್ಆರ್ಕೆ ಲೇಔಟ್ನ ಕರೊನಾ ಕೇರ್ ಸೆಂಟರ್ನಲ್ಲಿ ಭಾನುವಾರ ನಡೆದಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಕೂಸಗೂರ ಗ್ರಾಮದ 9 ಜನರಿಗೆ ಕರೊನಾ ಕೇರ್ ಸೆಂಟರ್ನಲ್ಲಿ ಮೇ 11ರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗ್ರಾಪಂ ಉಪಾಧ್ಯಕ್ಷನ ಶಿಫಾರಸಿನ ಮೇರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ 9 ಜನರಲ್ಲಿ ಇಬ್ಬರು ಸೋಂಕಿತರನ್ನು ಹೊರಗೆ ಬಿಟ್ಟಿದ್ದಾರೆ. ಈಗ ಆ ಇಬ್ಬರು ಸೋಂಕಿತರು ಗ್ರಾಮಕ್ಕೆ ತೆರಳಿ ‘ನಾವು ಹೇಗೆ ಹೊರಗೆ ಬಂದಿದ್ದೇವೆ ನೋಡಿ’ ಎನ್ನುತ್ತ ಗ್ರಾಮದ ತುಂಬ ಓಡಾಡುತ್ತಿದ್ದಾರಂತೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಇತರ ರೋಗಿಗಳಿಂದ ಆಕ್ರೋಶ
ಗ್ರಾಪಂ ಉಪಾಧ್ಯಕ್ಷ ಹೇಳಿದ ಮಾತ್ರಕ್ಕೆ ಇಬ್ಬರು ರೋಗಿಗಳನ್ನು ಹೇಗೆ ಹೊರಗೆ ಬಿಟ್ಟಿದ್ದೀರಿ ಎಂದು ಕರೊನಾ ಕೇರ್ ಸೆಂಟರ್ನಲ್ಲಿ ಬಾಕಿಯಿರುವ 7 ಜನ ಸೋಂಕಿತರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲೇ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚುತ್ತಿದೆ. ಇಂಥ ಸಮಯದಲ್ಲಿ ಅವರನ್ನು ಹೊರಗೆ ಬಿಡುವುದು ಸೂಕ್ತವೇ?. ಅವರಿಗೆ ಪಾಸಿಟಿವ್ ಬಂದು 6 ದಿನವಾಗಿದೆ. ಇನ್ನೂ ನಾಲ್ಕು ದಿನ ಚಿಕಿತ್ಸೆ ನೀಡಬೇಕು. ಕೂಡಲೆ ಅವರನ್ನು ವಾಪಸ್ ಕರೆಯಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಾಲೂಕಿನ ಕೂಸಗೂರ ಗ್ರಾಮದಿಂದ 9 ಜನರನ್ನು ಕರೆತಂದು ಕೋವಿಡ್ ಕೇರ್ ಸೆಂಟರ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಬ್ಬರು ವಾಪಸ್ ಊರಿಗೆ ಹೋಗಿದ್ದಾರೆ ಎನ್ನುವ ವಿಚಾರ ಗ್ರಾಮಸ್ಥರಿಂದ ತಿಳಿದಿದೆ. ಕೂಡಲೆ ಅವರನ್ನು ವಾಪಸ್ ಕರೆತಂದು ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು. ಕೋವಿಡ್ ಸೆಂಟರ್ನಲ್ಲಿ ಅವರು ಹತ್ತು ದಿನ ಚಿಕಿತ್ಸೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
| ಡಾ. ಕಾಂತೇಶ ಭಜಂತ್ರಿ, ಕೋವಿಡ್ ಕೇರ್ ಸೆಂಟರ್ಗಳ ಮೇಲುಸ್ತುವಾರಿ