ನವದೆಹಲಿ: ಕಾರ್ಯಾಚರಣೆ ನಡೆಸುವ ಸಂಬಂಧ ಉತ್ತರ ಸಿಕ್ಕಿಂನ ಸೇನಾ ನೆಲೆಯಲ್ಲಿ ನೆಲೆಸಿದ್ದ ಇಬ್ಬರು ಭಾರತೀಯ ಯೋಧರು ಹಿಮದೊಳಗೆ ಹೂತುಹೋಗಿರುವ ಘಟನೆ ಇಂದು ನಡೆದಿದೆ.
ಉತ್ತರ ಸಿಕ್ಕಿಂನ ಲುಗ್ನಕ್ ಪರ್ವತ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸುತ್ತಿದೆ. ಸೇನಾ ನೆಲೆಯ ಮೇಲೆ ಹಿಮಪಾತವಾಗಿದ್ದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಮತ್ತು ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ: ಮಾತಾಡುವುದರಿಂದಲೂ ಹರಡುತ್ತಂತೆ ಕರೊನಾ: ಮುಚ್ಚಿದ ಪೆಟ್ಟಿಗೆಯಲ್ಲಿ ನಡೆಯಿತು ಸಂಶೋಧನೆ!
ಮೇ.14ರಂದು ಉತ್ತರ ಸಿಕ್ಕಿಂನಲ್ಲಿ ಪೆಟ್ರೋಲಿಂಗ್- ಕಮ್- ಸ್ನೋ- ಕ್ಲಿಯರೆನ್ಸ್ ಕೆಲಸಕ್ಕೆ ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿ.ಎ ಹಾಗೂ ಸಪಳ ಷಣ್ಮುಖ ರಾವ್ ಅವರನ್ನು ನಿಯೋಜಿಸಲಾಗಿತ್ತು. ಇವರು ಸೇನಾ ನೆಲೆಯಲ್ಲಿ ತಂಗಿದ್ದರು. ಹಿಮಪಾತ ಆಗುತ್ತಿದ್ದಂತೆಯೇ, ಅವರನ್ನು ರಕ್ಷಣೆ ಮಾಡಲು ಸಾಕಷ್ಟು ಪರಿಶ್ರಮ ಪಡಲಾಗಿತ್ತು. ಆದರೂ ಇಬ್ಬರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಗುಂಪಿನಲ್ಲಿ ಒಟ್ಟು 18 ಮಂದಿ ಯೋಧರಿದ್ದರು. ಎಲ್ಲರೂ ಹಿಮಪಾತ ತೆರವುಗೊಳಿಸುವ ಶಿಬಿರದಲ್ಲಿ ಇದ್ದರು. ಉಳಿದವರೆಲ್ಲರೂ ಸುರಕ್ಷಿತವಾಗಿದ್ದಾರೆ.
ಇದನ್ನೂ ಓದಿ: ಸಾಧುಗಳ ಬರ್ಬರ ಹತ್ಯೆಯ ರಹಸ್ಯ ಬಯಲಾಗುವ ಮೊದಲೇ ಅಪಘಾತದಲ್ಲಿ ವಕೀಲನ ನಿಗೂಢ ಸಾವು!
2016ರಲ್ಲಿ ಸಿಯಾಚಿನ್ನಲ್ಲಿ ಸಂಭವಿಸಿದ್ದ ಭಾರಿ ಹಿಮಪಾತದಲ್ಲಿ ಸಿಲುಕಿ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಬಳಿಕ ಪತ್ತೆಯಾಗಿದ್ದರು. ಅವರನ್ನು ಜೀವಂತವಾಗಿ ಪತ್ತೆ ಮಾಡಿದ್ದರೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಬಳಿಕ ಮೃತಪಟ್ಟಿದ್ದರು.
2019ರಲ್ಲಿ ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್ನಲ್ಲಿ ಹಿಮಪಾತಕ್ಕೆ ನಾಲ್ವರು ಯೋಧರು ಹಾಗೂ ಇಬ್ಬರು ನಾಗರಿಕರು ಬಲಿಯಾಗಿದ್ದರು. (ಏಜೆನ್ಸೀಸ್)