ರಾಯ್ಪುರ: ಕಳೆದ ವರ್ಷ ಕರೊನಾ ಹಾವಳಿ ಶುರುವಾದ ಸಮಯದಲ್ಲಿ ಸ್ಥಗಿತಗೊಂಡು ಈ ವರ್ಷ ಕರೊನಾ ನಿಯಂತ್ರಣದಲ್ಲಿದ್ದ ವೇಳೆ ಪುನರಾರಂಭಗೊಂಡ ‘ರಸ್ತೆ ಸುರಕ್ಷತಾ ವಿಶ್ವ ಸರಣಿ ಟಿ20’ ಟೂರ್ನಿ ಇದೀಗ ನಿರ್ಣಾಯಕ ಘಟ್ಟ ತಲುಪಿದೆ. ಆತಿಥೇಯ ಭಾರತ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ತಂಡಗಳ ನಡುವೆ ಶಹೀದ್ ವೀರನಾರಾಯಣ ಸಿಂಗ್ ಸ್ಟೇಡಿಯಂನಲ್ಲಿ ಭಾನುವಾರ ಪ್ರಶಸ್ತಿ ಸುತ್ತಿನ ಹೋರಾಟ ನಡೆಯಲಿದೆ. 2011ರ ಏಕದಿನ ವಿಶ್ವಕಪ್ ೈನಲ್ನಲ್ಲಿ ಮುಖಾಮುಖಿಯಾಗಿದ್ದ ಭಾರತ-ಲಂಕಾ ತಂಡದಲ್ಲಿನ ಬಹುತೇಕ ಆಟಗಾರರೇ ಉಭಯ ತಂಡಗಳಲ್ಲಿರುವುದು ಪಂದ್ಯದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.
ಉಭಯ ತಂಡಗಳು ಲೀಗ್ ಹಂತದಲ್ಲಿ ಒಂದೇ ರೀತಿಯ ನಿರ್ವಹಣೆ ತೋರಿದ್ದು, ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 1ರಲ್ಲಿ ಸೋತಿವೆ. ಭಾರತ ತಂಡದ ಏಕೈಕ ಸೋಲು ಇಂಗ್ಲೆಂಡ್ ವಿರುದ್ಧ ಬಂದಿದ್ದರೆ, ಲಂಕಾ ತಂಡ ಭಾರತದೆದುರು ಮಣಿದಿತ್ತು. ಆದರೆ ಈ ಮುಖಾಮುಖಿ ಕಳೆದ ವರ್ಷ ಮಾರ್ಚ್ನಲ್ಲಿ ಟೂರ್ನಿ ಮೊಟಕುಗೊಳ್ಳುವುದಕ್ಕೆ ಮುನ್ನ ನಡೆದಿತ್ತು. ಆ ಬಳಿಕ ಟೂರ್ನಿ ಪುನರಾರಂಭದ ವೇಳೆಗೆ ಉಭಯ ತಂಡಗಳ ಬಲಾಬಲ ಸಾಕಷ್ಟು ಬದಲಾಗಿದೆ. ಇತ್ತೀಚೆಗೆ ನಿವೃತ್ತರಾದ ಕೆಲ ಆಟಗಾರರೂ (ವಿನಯ್ಕುಮಾರ್, ಯೂಸುಫ್ ಪಠಾಣ್, ನಮನ್ ಓಜಾ, ಉಪುಲ್ ತರಂಗ, ನುವಾನ್ ಕುಲಶೇಖರ) ಉಭಯ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಈ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಆರತಕ್ಷತೆ ಚಿತ್ರದಿಂದಾಗಿ ಕೆಂಗಣ್ಣಿಗೆ ಗುರಿಯಾದ ಜಸ್ಪ್ರೀತ್ ಬುಮ್ರಾ!
ಉಪಾಂತ್ಯದ ಹೋರಾಟದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ 12 ರನ್ಗಳಿಂದ ರೋಚಕ ಗೆಲುವು ದಾಖಲಿಸಿದ್ದರೆ, ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿರುದ್ಧ 8 ವಿಕೆಟ್ಗಳಿಂದ ಸುಲಭ ಗೆಲುವು ದಾಖಲಿಸಿತ್ತು.
*ಪಂದ್ಯ ಆರಂಭ: ರಾತ್ರಿ 7.00
*ನೇರಪ್ರಸಾರ: ಕಲರ್ಸ್ ಕನ್ನಡ ಸಿನಿಮಾ, ಕಲರ್ಸ್ ಸಿನೆಪ್ಲೆಕ್ಸ್.
ತಂಡಗಳು:
ಭಾರತ ಲೆಜೆಂಡ್ಸ್: ಸಚಿನ್ ತೆಂಡುಲ್ಕರ್ (ನಾಯಕ), ಮೊಹಮದ್ ಕೈಫ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮನ್ಪ್ರೀತ್ ಗೋನಿ, ಎಸ್. ಬದ್ರಿನಾಥ್, ಮುನಾಫ್ ಪಟೇಲ್, ಪ್ರಜ್ಞಾನ್ ಓಜಾ, ವಿನಯ್ಕುಮಾರ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ನಮನ್ ಓಜಾ.
ಶ್ರೀಲಂಕಾ ಲೆಜೆಂಡ್ಸ್: ತಿಲಕರತ್ನೆ ದಿಲ್ಶಾನ್ (ನಾಯಕ), ಸನತ್ ಜಯಸೂರ್ಯ, ಉಪುಲ್ ತರಂಗ, ಮಲಿಂದ ವರ್ಣಾಪುರ, ದುಲಂಜನ ವಿಜೆಸಿಂಘೆ, ಚಾಮರ ಸಿಲ್ವ, ಅಜಂತ ಮೆಂಡಿಸ್, ಧಮ್ಮಿಕಾ ಪ್ರಸಾದ್, ನುವಾನ್ ಕುಲಶೇಖರ, ರಂಗನಾ ಹೆರಾತ್, ತಿಲನ್ ತುಷಾರ, ಚಿಂತಕ ಜಯಸಿಂಘೆ, ಪರ್ವೇಜ್ ಮಹಾರೂಫ್, ಕೌಶಲ್ಯ ವೀರರತ್ನೆ, ರಸೆಲ್ ಅರ್ನಾಲ್ಡ್, ಚಾಮರ ಕಪುಗೆಡೆರ.
VIDEO | ಯುವ ವೇಗಿಯ ಎಸೆತಕ್ಕೆ ಧೋನಿ ಕ್ಲೀನ್ ಬೋಲ್ಡ್, ವಿಡಿಯೋ ವೈರಲ್!