More

    ಇವತ್ತಿನಿಂದ ನವ ಕರ್ನಾಟಕ ನಿರ್ಮಾಣ ಪ್ರಾರಂಭ: ಸಿಎಂ ಬಸವರಾಜ ಬೊಮ್ಮಾಯಿ ಸಂಕಲ್ಪ

    ಬೆಂಗಳೂರು: 75ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಅವರು ಧ್ವಜಾರೋಹಣ ನೇರವೇರಿಸಿದರು.

    ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಬಳಿಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

    ನಾಡಿನ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ಮಾತು ಆರಂಭಿಸಿದ ಬೊಮ್ಮಾಯಿ, ನಮ್ಮದು ಯಶಸ್ವಿ ಪ್ರಜಾಪ್ರಭುತ್ವ ದೇಶವಾಗಿದೆ. ಈ ಪ್ರಜಾಪ್ರಭುತ್ವ ಯಶಸ್ವಿ ಆಗಲು ಸಂವಿಧಾನ ಮೂಲ ಕಾರಣವಾಗಿದೆ. ಸಂವಿಧಾನ ಒಂದು ವಿಕಾಸ ಗೀತೆ ಆಗಿದೆ. ಹೀಗಾಗಿ ಸಂವಿಧಾನ ನಮ್ಮೆಲ್ಲರ ಭಗವದ್ಗೀತೆ ಆಗಿದೆ. ಈ ಸಂದರ್ಭದಲ್ಲಿ ಡಾ. ಬಾಬಾ ಸಾಹೇಬ್​ ಅಂಬೇಡ್ಕರ್​ ಅವರಿಗೆ ನಮನ ಸಲ್ಲಿಸುತ್ತೇನೆ ಎಂದರು.

    ಭಾರತ ವಸಾಹತು ಶಾಹಿಗಳಿಂದ ಬಿಡುಗಡೆಯಾಗಿ 75 ವರ್ಷ ಆಗಿದೆ. ಈ ಸಂದರ್ಭದಲ್ಲಿ ನಾಡಿನ ಜನತೆಗೆ ಸಂದೇಶ ನೀಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವೆಂದು ಹೇಳಿದ ಸಿಎಂ ಬೊಮ್ಮಾಯಿ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದರು. ವಿಶೇಷವಾಗಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣರನ್ನು ಸ್ಮರಿಸಿದರು.

    ಇವತ್ತಿನಿಂದ ನವ ಕರ್ನಾಟಕ ನಿರ್ಮಾಣ ಪ್ರಾರಂಭ ಆಗುತ್ತೆ. ಹೊಸ ಚಿಂತನೆ, ಹೊಸ ದಾರಿ, ಹೊಸ ದಿಕ್ಸೂಚನೆ, ಮಾನವ ಸಂಪನ್ಮೂಲ ಬಳಸಿಕೊಂಡು, ಹೊಸ ತಂತ್ರಜ್ಞಾನ ಬಳಕೆ ಮಾಡಿ, ವೈಜ್ಞಾನಿಕವಾಗಿ ಕೃಷಿ, ಸೇವಾ ವಲಯ ವನ್ನ ಮಾಡಲು ಸಂಕಲ್ಪ ಮಾಡಿದ್ದೇವೆ. ಆಳುವುದು ಬೇರೆ ಆಡಳಿತ ಮಾಡುವುದು ಬೇರೆ. 11 ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ಹೇಳಿದ ಮಾತಿದು. ಇವತ್ತಿನ ಕಾಲದಲ್ಲಿ ಆಳುವವರು ಆಡಳಿತ ಮಾಡ್ತಿದ್ದಾರೆ, ಆಡಳಿತ ಮಾಡುವವರು ಆಳುತ್ತಿದ್ದಾರೆ. ನಾಡಿನ ಕೊನೆ ಹಂತದ ಜನತೆಗೆ ನಮ್ಮ ಕಾರ್ಯಕ್ರಮ ಮುಟ್ಟುವವರೆಗೂ ನಮ್ಮ ಕೆಲಸ ಮಾಡ್ತೇವೆ ಎಂದರು.

    ನನ್ನ ಕನ್ನಡ ನಾಡಿನ ಕಟ್ಟಕಡೆಯ ಕುಟುಂಬ, ಪ್ರತಿಯೊಬ್ಬರ ಬದುಕು ಬೆಳವಣಿಗೆ ಆಗಬೇಕು, ಸುಖ ಶಾಂತಿ ಆರೋಗ್ಯ ಸಿಗಬೇಕೆಂಬ ಸದ್ದುದ್ದೇಶದಿಂದ ಕೆಲಸ ಮಾಡ್ತಿದ್ದೇನೆ. ಇನ್ನು 20 ತಿಂಗಳು ಮಾತ್ರ ಅವಕಾಶ ಇರೊದೆಂದು ನನಗೆ ಗೊತ್ತಿದೆ. ಇದನ್ನೆಲ್ಲ ಮಾಡಲು ದೀರ್ಘಾವಧಿ ಸಮಯ ಬೇಕು. ಅಲ್ಪಾವಧಿಯಲ್ಲಿ ಏನು ಕಾರ್ಯಕ್ರಮ ಕೊಡಬೇಕು ಅದನ್ನ ಮಾಡ್ತೇವೆ. ಜನರು ಕಚೇರಿಗಳು ಅಲೆಯದಂತೆ ಮಾಡಬೇಕು, ತಾಲೂಕು ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಜನ ಅಲೆಯದಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದರು.

    ಕರೊನಾ ನಮಗೆ ದೊಡ್ಡ ಸವಾಲಾಗಿದೆ. ಈ ಸಂದರ್ಭದಲ್ಲಿ ನಮ್ಮ ನಿಕಟಪೂರ್ವ ಸಿಎಂ ಯಡಿಯೂರಪ್ಪನವರನ್ನ ನಾನು ನೆನಪು ಮಾಡಿಕೊಳ್ಳುತ್ತೇನೆ. ಕೋವಿಡ್ ನಿರ್ವಹಣೆಗೆ ಸಾಕಷ್ಟು ಅನುದಾನ ನೀಡಿದ್ರು. ಅವರ ಅಭಿವೃದ್ಧಿ ಕಾರ್ಯಕ್ರಮ ನಮಗೆ ಮಾರ್ಗದರ್ಶನವಾಗಿದೆ. ನಾನು ಅಧಿಕಾರಕ್ಕೆ ಬಂದ ತಕ್ಷಣ ಕೋವಿಡ್ ನಿರ್ವಹಣೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದೇನೆ. ಕೇರಳ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸೋಂಕು ಇದೆ, ಹೀಗಾಗಿ ನಾನೇ ಗಡಿ ಜಿಲ್ಲೆಗಳಿಗೆ ಹೋಗಿ ಪರಿಶೀಲನೆ ನಡೆಸಿದ್ದೇನೆ. ಜನತೆ ಕೋವಿಡ್ ನಿಯಮ ಪಾಲಿಸಿದ್ರೆ, ನಾವು ತಂತ್ರಜ್ಞಾನ ಬಳಸಿಕೊಂಡು ನಮ್ಮ ನಾಡಿನ ಜನತೆಯನ್ನ ರಕ್ಷಿಸುತ್ತೇವೆ ಎಂದು ತಿಳಿಸಿದರು.

    ರೈತ ವಿಧ್ಯಾನಿಧಿ ಕಾರ್ಯಕ್ರಮವನ್ನು ಘೋಷಿಸಿದ್ದೇವೆ. ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ವಾರ್ಷಿಕ 2500 ರೂಪಾಯಿಗಳಿಂದ 11 ಸಾವಿರ ರೂ. ವರೆಗೆ ವಿದ್ಯಾರ್ಥಿ ವೇತನ ನೀಡಲು ಆದೇಶ ಮಾಡಿದ್ದೇನೆ. ಇದರಿಂದ 17 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು. ನಮ್ಮ ತಾಯಿಯಂದಿರ ಶಕ್ತಿ ನಮ್ಮ ನಾಡು ಕಟ್ಟುವಲ್ಲಿ ಪ್ರಮುಖ ಪಾತ್ರ ಇದೆ. ಅವರಿಗೆ ಮೊದಲ ಆದ್ಯತೆ ನಮ್ಮ ಸರ್ಕಾರ ನೀಡಲಿದೆ. ಎಸ್ಸಿ-ಎಸ್ಟಿ ಮಹಿಳೆಯರ ಜೊತೆಗೆ ಶ್ರೀ ಶಕ್ತಿಯನ್ನ ಬಲಪಡಿಸುವ ಕೆಲಸ ಮಾಡ್ತೇವೆ ಎಂದು ಹೇಳಿದರು.

    ಕೈಗಾರಿಕೆಯಲ್ಲಿ ರಾಜ್ಯವನ್ನು ನಂಬರ್ 1 ಮಾಡಲು ಪ್ರಯತ್ನ ಮಾಡಲಾಗುವುದು. ಹೆಚ್ಚಿನ ಬಂಡವಾಳ ತಂದು ಯುವಕರಿಗೆ ಉದ್ಯೋಗ ಒದಗಿಸುವ ಕೆಲಸ ಮಾಡ್ತೇವೆ. ನಾಡಿನ ನೆಲ-ಜಲದ ವಿಷಯವಾಗಿ ಯಾವುದೇ ರಾಜಿ ಇಲ್ಲ. ಹಪ್ಪರ್ ಕೃಷ್ಣ ಯೋಜನೆಗೆ ಕಾನೂನಿನ ತೊಡಕಿದೆ ಅದನ್ನು ನಿವಾರಿಸುತ್ತೇನೆ. ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡ್ತಿದ್ದೇನೆ. ಕಾನೂನಿನ ತೊಡಕನ್ನು ಆದಷ್ಟು ಬೇಗ ನಿವಾರಿಸಿ ಯೋಜನೆ ಜಾರಿಗೊಳಿಸಿ ಕುಡಿಯುವ ನೀರನ್ನ ಒದಗಿಸುವ ಕೆಲಸ ಮಾಡ್ತೇವೆ. ಮಹದಾಯಿ ಯೋಜನೆಯನ್ನು ಜಾರಿಗೊಳಿಸುವ ಪ್ರಯತ್ನ ಮಾಡ್ತೇವೆ ಎಂದು ತಿಳಿಸಿದರು.

    ಅಮೃತ ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ ಸರ್ವರಿಗೂ ವಸತಿಯನ್ನು ನೀಡುವ ಯೋಜನೆ ಮಾಡಿದ್ದೇವೆ. ಯಾರು ಸಹ ವಸತಿ ರಹಿತರಾಗಿರಬಾರದು. 750 ಗ್ರಾಮ ಪಂಚಾಯಿತಿಗಳಲ್ಲಿ ಸರ್ವರಿಗೂ ವಸತಿ ಕಲ್ಪಿಸಲಾಗುವುದು ಎಂದು ತಿಳಿಸಿದರು. ರೈತ, ನೇಕಾರ, ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು 750 ಅಮೃತ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ ಮಾಡಲಾಗುವುದು ಮತ್ತು ಆಯ್ದ 75 ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಚ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಅಮೃತ ನಿರ್ಮಲ ನಗರ ಯೋಜನೆ ರೂಪಿಸಿ, ಪ್ರತಿ ಸ್ಥಳೀಯ ಸಂಸ್ಥೆಗೆ 1 ಕೋಟಿ ರೂ.ನಂತೆ 75 ಕೋಟಿ ರೂ ಒದಗಿಸಲಾಗುವುದು ಎಂದು ತಿಳಿಸಿದರು.

    ನನ್ನ ಬಗ್ಗೆ ಹಲವಾರು ಅನುಮಾನ ಟೀಕೆಗಳನ್ನು ನೋಡ್ತಿದ್ದೇನೆ. ಅದೆಲ್ಲಾ ನನಗೆ ಆಶೀರ್ವಾದ, ಅದನ್ನ ಮೆಟ್ಟಿಲಾಗಿ ಮಾಡಿಕೊಂಡು ಯಶಸ್ವಿ ಆಡಳಿತ ಕೊಡುತ್ತೇನೆ. ಈ ನಾಡಿನ ಪ್ರತಿಯೊಬ್ಬರು ಗೌರವಪೂರ್ವಕವಾಗಿ ಬದುಕುವಂತೆ ಮಾಡುತ್ತೇನೆ. ಇಂದು ಜ್ಞಾನ ಇದ್ದವರು ಜಗತ್ತನ್ನ ಆಳುತ್ತಿದ್ದಾರೆ. ಬೆಂಗಳೂರು ಜ್ಞಾನದ ನಾಡು. ತಂತ್ರಜ್ಞಾನದಲ್ಲಿ ಮುಂದುವರೆಯುತ್ತಿರುವ ನಾಡು. ಗಡಿ ಭಾಗದ ಅಭಿವೃದ್ಧಿಗೆ ವಿಶೇಷ ಗಮನಷಕೊಡ್ತೇವೆ. ಪ್ರಾದೇಶಿಕ ಅಸಮತೋಲನ ತಪ್ಪಿಸಿ, ಸಮತೋಲನ ತರುವ ಕೆಲಸ ಮಾಡ್ತೇವೆ. ಒಂದು ಬಾರಿ ಸಮತೋಲನಕ್ಕೆ ತಂದು ಅಭಿವೃದ್ಧಿ ಪಥದತ್ತ ನಡೆಸಿಕೊಂಡು ಹೋಗುತ್ತೇವೆ. ಇಂದು ಸಂಕಲ್ಪ ಮಾಡಿಕೊಳ್ಳುವ ದಿನ, ಕೇವಲ ಸಂಕಲ್ಪ ಮಾಡುವುದಷ್ಟೇ ಅಲ್ಲ ಅದನ್ನ ಕಾರ್ಯಗತಕ್ಕೆ ತರುತ್ತೇವೆ. ಈ ಬದಲಾವಣೆಯನ್ನ ಕೆಲವೇ ತಿಂಗಳಲ್ಲಿ ನೋಡ್ತೀರಾ. ಕೆಲವೇ ದಿನಗಳಲ್ಲಿ ಆ ಬದಲಾವಣೆ ಆರಂಭ ಆಗುತ್ತೆ. ಪ್ರತಿಯೊಬ್ಬ ಪ್ರಜೆಯ ಸಲಹೆಯನ್ನು ಪಡೆದು ನಾಡು ಕಟ್ಟುವ ಕೆಲಸ ಮಾಡ್ತೇವೆ. ಅಮೃತ ಮಹೋತ್ಸವ ಸಮಾರಂಭದಲ್ಲಿ ನಿಮ್ಮ ಬದುಕು ಬಂಗಾರವಾಗಲಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts