ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಸೇವಾ ಚಟುವಟಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಹೆಚ್ಚಿನ ಮಂದಿಗೆ ಅನುಕೂಲವಾಗುತ್ತದೆ. ಆರೋಗ್ಯ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ನ್ಯಾಷನಲ್ ಮೆಡಿಕೋಸ್ ಆರ್ಗನೈಜೇಶನ್(ಎನ್ಎಂಒ) ಮತ್ತು ವಿಕಾಸ ಟ್ರಸ್ಟ್ ಆಶ್ರಯದಲ್ಲಿ ಸಿಹಿಮೊಗ್ಗೆ ಸ್ವಾಸ್ಥೃ ಸೇವಾ ಯಾತ್ರಾ ಘೋಷ ವಾಕ್ಯದಡಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಒಂದೇ ದಿನ ನಗರದ 50 ಕಡೆಗಳಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸಿ, 4,500 ಮಂದಿಯ ಆರೋಗ್ಯ ತಪಾಸಣೆ ಮಾಡಿ, ಈ ಪೈಕಿ 2,500 ಜನರ ಸ್ಕ್ರೀನಿಂಗ್ ನಡೆಸಿರುವುದು ವಿಶೇಷವಾಗಿದೆ ಎಂದರು.
ಇಂತಹ ಆರೋಗ್ಯ ತಪಾಸಣಾ ಶಿಬಿರದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವಿಶಿಷ್ಟ ಅನುಭವ ಪಡೆಯಬಹುದು. ಅವರಿಗೆ ಜನರ ಸಂಪರ್ಕವೂ ದೊರೆಯುತ್ತದೆ. ಮುಂಬರುವ ದಿನಗಳಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಕೊಳ್ಳಲು ಶಿಬಿರ ಅನುಕೂಲಕರವಾಗಿದೆ ಎಂದು ಹೇಳಿದರು.
ತೇಜಸ್ ಟ್ರಸ್ಟ್ನ ಕಾರ್ಯದರ್ಶಿ ಮಧುಕರ್ ಮಾತನಾಡಿ, ಸೇವೆ ಎಂಬ ಪದ ಬೇರೆ ಅರ್ಥದಲ್ಲಿ ಇಂದು ಬಳಕೆಯಾಗುತ್ತಿದೆ. ವಾಸ್ತವದಲ್ಲಿ ಯಾವುದೇ ಪ್ರತಿಲಾಪೇಕ್ಷೆಯಿಲ್ಲದೆ ಮಾಡುವ ಕೆಲಸವನ್ನು ನಿಜವಾದ ಸೇವೆ ಎನ್ನಲಾಗುತ್ತದೆ. ಈ ಶಿಬಿರದಲ್ಲಿ ಅಂತಹ ಸೇವೆ ಮಾಡಲಾಗಿದೆ ಎಂದರು.
50 ಸೇವಾ ಬಸ್ತಿಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ಒಂದೊಂದು ಕಡೆಗಳಲ್ಲಿಯೂ ವೃದ್ಧರು, ಮಹಿಳೆಯರು ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಆರೋಗ್ಯವಂತ ದೇಹ ಹಾಗೂ ಮನಸ್ಸು ಇದ್ದರೆ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗಲಿದೆ. ಆರೋಗ್ಯ ಸಮಸ್ಯೆ ಇದ್ದರೂ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವಲ್ಲಿ ಅನೇಕರು ಹಿಂದೇಟು ಹಾಕುತ್ತಾರೆ. ಇದನ್ನು ಮನಗಂಡು ವಿಕಾಸ ಟ್ರಸ್ಟ್ನಿಂದ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇಎನ್ಟಿ ತಜ್ಞ ಡಾ. ಎಸ್.ಶ್ರೀಧರ್ ಮಾತನಾಡಿ, ನ್ಯಾಷನಲ್ ಮೆಡಿಕೋರ್ಸ್ ಆರ್ಗನೈಜೇಶನ್ 1972ರಲ್ಲಿ ಆರಂಭವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲೇ ಸೇವಾ ಪರಿಕಲ್ಪನೆ ಮೂಡಲಿ ಎಂಬ ಉದ್ದೇಶದಿಂದ ಅವರನ್ನು ಸಕ್ರಿಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಸೇವಾ ಯಾತ್ರೆ ಅಧ್ಯಕ್ಷ ಡಾ. ಕೆ.ಎನ್. ಸಂಜಯ್, ವಿಕಾಸ ಟ್ರಸ್ಟ್ ಕಾರ್ಯದರ್ಶಿ ಸಚ್ಚಿದಾನಂದ, ಡಾ. ಶೀಲಾ, ಡಾ. ಕೆ.ಎಂ.ಮಿಥುನ್ ಇದ್ದರು.