ಹುಬ್ಬಳ್ಳಿ: ತಾಯಿ ಕೈಯಲ್ಲಿದ್ದ 40 ದಿನದ ಹಸುಗೂಸನ್ನು ವ್ಯಕ್ತಿಯೊಬ್ಬ ಕಿತ್ತುಕೊಂಡು ಹೋದ ಘಟನೆ ಇಲ್ಲಿನ ಕಿಮ್ಸ್ ಮಕ್ಕಳ ವಾರ್ಡ್ನಲ್ಲಿ ನಡೆದಿದೆ.
ಕುಂದಗೋಳದ ನೆಹರು ನಗರದ ನಿವಾಸಿ ಸಲ್ಮಾ ಎಂಬುವರ ಮಗು ಕಳುವಾಗಿದೆ. ಮಗುವಿನ ಮೆದುಳಿನಲ್ಲಿ ನೀರು ತುಂಬಿದೆ ಎಂದು 14 ದಿನಗಳ ಹಿಂದೆ ಕಿಮ್ಸ್ನ ಮಕ್ಕಳ ವಾರ್ಡ್ನಲ್ಲಿ ದಾಖಲಿಸಿದ್ದೆವು. ಚಿಕಿತ್ಸೆಗೆ ಸ್ಪಂದಿಸಿದ ಮಗುವನ್ನು ವೈದ್ಯರು ಇಂದು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದರು. ಮಗು ಅಳುತ್ತಿದೆ ಎಂದು ಎತ್ತಿಕೊಂಡು ವಾರ್ಡ್ನಿಂದ ಹೊರಗಡೆ ಬಂದಾಗ ಬಿಳಿ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಕಿತ್ತುಕೊಂಡು ಓಡಿ ಹೊಗಿದ್ದಾನೆ’ ಎಂದು ಸಲ್ಮಾ ಆರೋಪಿಸಿದ್ದಾರೆ.
ಕುಂದಗೋಳದ ಆಸ್ಪತ್ರೆಯಲ್ಲಿ ಮಗುವನ್ನು ತೋರಿಸಿದಾಗ ಕಿಮ್ಸ್ಗೆ ಹೋಗುವಂತೆ ಸೂಚಿಸಿದ್ದರು. ಇಲ್ಲಿ ಉತ್ತಮವಾಗಿಯೇ ಚಿಕಿತ್ಸೆ ದೊರೆತಿದೆ. ಆದರೆ, ಭದ್ರತಾ ವೈಫಲ್ಯದಿಂದಾಗಿಯೇ ಮಗು ಕಳವು ಆಗಿದೆ. ಮಗುವನ್ನು ಎತ್ತಿಕೊಂಡು ಹೋಗುವಾಗ ತಾಯಿ ಜೋರಾಗಿ ಕಿರುಚಿದ್ದಾಳೆ. ಆದರೆ, ಯಾರೊಬ್ಬರೂ ಬಂದಿಲ್ಲ ಎಂದು ಮಗುವಿನ ದೊಡ್ಡಪ್ಪ ಸ್ಲಾಂ ಶೇಖ್ ಆರೋಪಿಸಿದ್ದಾರೆ.
ಮೆದುಳಿನ ಸಮಸ್ಯೆಯಿಂದ ಮಗು ವಾಂತಿ ಮಾಡಿಕೊಳ್ಳುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಮಗುವನ್ನು ಮಧ್ಯಾಹ್ನ 1 ಗಂಟೆ ವೇಳೆ ಬಿಡುಗಡೆ ಮಾಡಿದ್ದೇವೆ. ತಾಯಿ ಮಗುವನ್ನು ಎತ್ತಿಕೊಂಡು ಆಸ್ಪತ್ರೆಯ ಗೇಟ್ಗೆ ಬಂದಿದ್ದಾರೆ. ಆ ವೇಳೆ ವ್ಯಕ್ತಿಯೊಬ್ಬ ಎತ್ತಿಕೊಂಡು ಹೋಗಿದ್ದಾನೆ ಎಂದು ದೂರಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ ಎಂದು ಕಿಮ್ಸ್ ವೈದ್ಯಕೀಯ ಅಧೀಕ್ಷಕ ಸಿ. ಅರುಣಕುಮಾರ ತಿಳಿಸಿದ್ದಾರೆ.
ಮಗು ಕಳವು ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಆಯುಕ್ತ ಲಾಭೂರಾಮ, ಡಿಸಿಪಿ ಸಾಹಿಲ್ ಬಾಗ್ಲಾ, ಎಸಿಪಿ ವಿನೋದ ಮುಕ್ತೇದಾರ, ಇನ್ಸ್ಪೆಕ್ಟರ್ಗಳಾದ ಮಹಾಂತೇಶ ಹೊಳಿ ಮತ್ತು ಜಗದೀಶ ಹಂಚಿನಾಳ ಅವರು ಕಿಮ್ಸ್ಗೆ ಧಾವಿಸಿ ಎಲ್ಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು