ಚನ್ನರಾಯಪಟ್ಟಣ: ಮೂರು ದಿನಗಳ ಹಿಂದೆ ನಾಪತ್ತೆಯಾಗಿ ಆತಂಕ ಮೂಡಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ವೈದ್ಯಾಧಿಕಾರಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಟಿಎಚ್ಒ ಡಾ.ಮಂಜುನಾಥ್ ಅವರು ಡಿ.15ರಂದು ಡ್ಯೂಟಿ ಮುಗಿಸಿ ತನ್ನ ಕಾರಿನಲ್ಲಿ ಹೊರಟವರು ಮನೆಗೆ ತೆರಳದೆ ಕಣ್ಮರೆಯಾಗಿದ್ದರು. ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಲ್ಲಿ ಕುಟುಂಬಸ್ಥರು ಹುಡುಕಿದರೂ ಅವರ ಸುಳಿವು ಸಿಕ್ಕಿರಲಿಲ್ಲ. ಗಾಬರಿಗೊಂಡ ಕುಟುಂಬಸ್ಥರು ಹೊಸಕೋಟೆ ಪೊಲೀಸ್ ಠಾಣೆಗೆ ಡಿ.16ರಂದು ದೂರು ನೀಡಿದ್ದರು. ಪೊಲೀಸ್ ಪ್ರಕಟಣೆ ರಾಜ್ಯಾವ್ಯಾಪ್ತಿ ಹರಡಿತ್ತು. ಇನ್ನು ನಕಲಿ ಕ್ಲಿನಿಕ್ ಮೇಲೆ ದಾಳಿ ಮಾಡಿದ್ದ ಟಿಎಚ್ಒಗೆ ಎಂಟಿಬಿ ನಾಗರಾಜ್ರ ಆಪ್ತ ಜಯರಾಜ್ ಬೆದರಿಕೆ ಹಾಕಿದ್ದ ಆಡಿಯೋ ಕೂಡ ವೈರಲ್ ಆಗಿತ್ತು. ಇದು ಡಾ.ಮಂಜುನಾಥ್ ಕಣ್ಮರೆ ಪ್ರಕರಣದ ಸುತ್ತ ಮತ್ತಷ್ಟು ಅನುಮಾನ ಸೃಷ್ಠಿಸಿತ್ತು.
ಡಾ.ಮಂಜುನಾಥ್ ಕಣ್ಮರೆಯಾಗಲು ಕಾರಣ ಏನೆಂಬುದು ತಿಳಿದಿಲ್ಲ. ಜತೆಗೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದು ಇನ್ನಷ್ಟು ಆತಂಕ ಹಾಗೂ ಅನುಮಾನ ಮೂಡಿಸಿತ್ತು. ಆದರೆ ಕಣ್ಮರೆಯಾಗಿದ್ದ ಟಿಎಚ್ಒ ಡಾ.ಮಂಜುನಾಥ್ ಶುಕ್ರವಾರ ಬೆಳಗ್ಗೆ 8.30ರ ಸುಮಾರಿನಲ್ಲಿ ಹಾಸನ ಕಡೆಯಿಂದ ತನ್ನ ಕಾರಿನಲ್ಲಿ ಶಾಂತಿಗ್ರಾಮದ ಟೋಲ್ ದಾಟಿ ಮುಂದೆ ಹೋದರು. ಇವರನ್ನು ಗಮನಿಸಿದ ಟೋಲ್ ಸಿಬ್ಬಂದಿ ಹಿರೀಸಾವೆ ಟೋಲ್ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣ ಹಿರೀಸಾವೆ ಪೊಲೀಸರು ಕುಣಿಗಲ್ ಠಾಣೆಗೆ ಮಾಹಿತಿ ಮುಟ್ಟಿಸಿದರು. ಟಿಎಚ್ಒ ತೆರಳುತಿದ್ದ ಕಾರು ಶಾಂತಿಗ್ರಾಮದಿಂದ ಹಿರೀಸಾವೆ ಟೋಲ್ ಬಳಿಗೆ ಬರುವಷ್ಟರಲ್ಲಿ ಸ್ಥಳಕ್ಕೆ ಹಿರೀಸಾವೆ ಪೊಲೀಸರು ಧಾವಿಸಿದ್ದರು. ಟಿಎಚ್ಒ ಡಾ.ಮಂಜುನಾಥ್ ತೆರಳುತ್ತಿದ್ದ ಕಾರು ಟೋಲ್ ಬಳಿಗೆ ಬರುತಿದ್ದಂತೆಯೇ ತಡೆದು ನಿಲ್ಲಿಸಿದ್ದರು.
ಬಳಿಕ ಡಾ.ಮಂಜುನಾಥ್ ಬೆಂಗಳೂರು ತಲುಪಲು ಕುಣಿಗಲ್ ಡಿವೈಎಸ್ಪಿ ಜಗದೀಶ್ ಎಸ್ಕಾಟ್ ವ್ಯವಸ್ಥೆ ಮಾಡಿದರು. ಆದ್ರೆ ವೈದ್ಯಾಧಿಕಾರಿ ನಾಪತ್ತೆ ಏಕೆ ಆಗಿದ್ದರು ಎಂಬುದರ ಕಾರಣ ಇನ್ನೂ ಗೊತ್ತಾಗಿಲ್ಲ.
ಟಿಎಚ್ಒ ಡಾ.ಮಂಜುನಾಥ್ ಕಾಣೆಯಾಗಿರುವ ಬಗ್ಗೆ ಬೆಂಗಳೂರು ಜಿಲ್ಲೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣದ ಬಗ್ಗೆ ಅಲ್ಲಿಯೇ ತನಿಖೆಯಾಗಬೇಕಿದೆ. ಆದರೆ ನಮ್ಮ ಸರಹದ್ದು ಮೂಲಕ ಬೆಂಗಳೂರಿಗೆ ತೆರಳಲು ಎಸ್ಕಾರ್ಟ್ ವ್ಯವಸ್ಥೆ ಮಾಡಿಕೊಡಲಾಗಿದೆ.
| ಜಗದೀಶ್ ಡಿವೈಎಸ್ಪಿ ಕುಣಿಗಲ್