ಹೊನ್ನಾಳಿ: ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಾನಿಗೊಳಗಾದ ಕುಟುಂಬಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಶನಿವಾರ ವೈಯಕ್ತಿಕವಾಗಿ 15 ಸಾವಿರ ರೂ. ಸಹಾಯ ಧನ ನೀಡಿ ಸಾಂತ್ವನ ಹೇಳಿದರು.
ಶುಕ್ರವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಗ್ರಾಮದ ಭಾಗ್ಯಮ್ಮ-ಸಿದ್ದಲಿಂಗಪ್ಪಾರ ರಾಜಪ್ಪ ಕುಟುಂಬ, ಮನೆ ಹಾಗೂ ದಿನಬಳಕೆ ವಸ್ತುಗಳು, ಐದು ತೊಲದಷ್ಟು ಬಂಗಾರದ ಒಡವೆ, ದವಸ-ಧಾನ್ಯ, ಬಟ್ಟೆ-ಬರೆ, ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ಕಳೆದುಕೊಂಡಿದೆ. ತಮ್ಮ ಮಗುವಿನ ನಾಲ್ಕನೇ ತರಗತಿಯ ಎಲ್ಲ ಪುಸ್ತಕಗಳೂ ಸುಟ್ಟು ಹೋಗಿರುವುದಾಗಿ ಭಾಗ್ಯಮ್ಮ-ರಾಜಪ್ಪ ದಂಪತಿ ಎಂ.ಪಿ.ರೇಣುಕಾಚಾರ್ಯ ಎದುರು ಕಣ್ಣೀರಿಟ್ಟರು.
ಆಶ್ರಯ ಯೋಜನೆಯಡಿ ಮನೆ ಒದಗಿಸುವ ಭರವಸೆ ನೀಡಿದರು. ತಾಲೂಕು ಆಡಳಿತದಿಂದ ಧನಸಹಾಯ, ಬಟ್ಟೆ, ವಿದ್ಯಾರ್ಥಿನಿಗೆ ಪುಸ್ತಕ, ಅಡುಗೆ ಅನಿಲ ಸಿಲಿಂಡರ್-ಒಲೆ ಮತ್ತಿತರ ವಸ್ತುಗಳನ್ನು ದೊರಕಿಸುವುದಾಗಿ ರೇಣುಕಾಚಾರ್ಯ ಭರವಸೆ ನೀಡಿದರು.
ತಹಸೀಲ್ದಾರ್ ತುಷಾರ್ ಬಿ.ಹೊಸೂರು, ಸಿಪಿಐ ಟಿ.ವಿ.ದೇವರಾಜ್, ಪಿಎಸ್ಸೈ ಟಿ.ಎನ್.ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಕೆ.ಮುನೇಶ್ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.