ಹಿರಿಯೂರು: ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಕಳ್ಳರನ್ನು ಹಿರಿಯೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಪಿಐ ಚನ್ನೇಗೌಡ ಮತ್ತು ಗ್ರಾಮಾಂತರ ಠಾಣೆ ಪಿಎಸ್ಐ ಪರಮೇಶ್ ನೇತೃತ್ವದ ತಂಡ, ಪಾವಗಡ ತಾಲೂಕಿನ ಜಗನ್ನಾಥ್ (27), ಬಾಗೆಪಲ್ಲಿ ತಾಲೂಕಿನ ರಮೇಶ್ (32) ಉಮಾಶಂಕರ್ (31) ಈ ಮೂವರನ್ನು ಬಂಧಿಸಿದೆ.
ಇವರ ವಿರುದ್ಧ ಚಿತ್ರದುರ್ಗ, ಮಧುಗಿರಿ, ಕೋಲಾರ, ಶಿರಾ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ತಿರುಪತಿ, ಹೈದರಾಬಾದ್, ಅನಂತಪುರ, ತೆಲಂಗಾಣ ರಾಜ್ಯದಲ್ಲಿ ಮನೆಗಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಬಂಧಿತರಿಂದ 10 ಲಕ್ಷ ರೂ. ಮೌಲ್ಯದ ಚಿನ್ನ, 1 ಕೆ.ಜಿ. ಬೆಳ್ಳಿ, ಒಂದು ಕೃಷ್ಣನ ವಿಗ್ರಹ, ಟಿವಿಯನ್ನು ವಶಪಡಿಸಿಕೊಳ್ಳಲಾಗಿದೆ.
ಹಿರಿಯೂರು ಪೊಲೀಸರ ಕಾರ್ಯವನ್ನು ಎಸ್ಪಿ ಜಿ.ರಾಧಿಕಾ ಶ್ಲಾಘಿಸಿದ್ದಾರೆ. ಹೆಚ್ಚುವರಿ ಎಸ್ಪಿ ಎಂ.ಬಿ.ನಂದಗಾವಿ, ಡಿವೈಎಸ್ಪಿ ರಮೇಶ್, ಸಿಪಿಐ ಚನ್ನೇಗೌಡ, ಪಿಎಸ್ಐ ಪರಮೇಶ್ ಇತರರಿದ್ದರು.