ಮೂಡಿಗೆರೆ: ಲವ್ ಜಿಹಾದ್ ಮತ್ತು ಮತಾಂತರದ ಮೂಲಕ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ವಿಎಚ್ಪಿ, ಬಜರಂಗದಳ ಕಾರ್ಯಕರ್ತರು ತಹಸೀಲ್ದಾರ್ ರಮೇಶ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಬಜರಂಗದಳದ ಜಿಲ್ಲಾ ಸಹ ಸಂಚಾಲಕ ಅವಿನಾಶ್ ಮಾತನಾಡಿ, ದೇಶದಲ್ಲಿ ಮತಾಂತರ, ಲವ್ ಜಿಹಾದ್ ಹಿಂದಿನಿಂದಲೂ ಅವ್ಯಾಹತವಾಗಿ ನಡೆಯುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು, ಫ್ರೆಂಚರ ಆಗಮನದಿಂದ ಹಿಂದು ಧರ್ವಿುಯರ ಮೇಲೆ ದೌರ್ಜನ್ಯ ಆರಂಭವಾಗಿತ್ತು. ಮತಾಂತರಕ್ಕೆ ಒಪ್ಪದಿದ್ದರೆ ಹತ್ಯೆ ಮಾಡಲಾಗುತ್ತಿತ್ತು. ಸ್ವಾತಂತ್ರ್ಯ ನಂತರ ದೇಶವನ್ನಾಳಿದ ನಾಯಕರ ವೈಫಲ್ಯ, ರಾಜಕೀಯ ಕಾರಣದಿಂದ ಮತಾಂತರ ಎಲ್ಲೆಡೆ ಪಸರಿಸಿದೆ. ಇದರ ವಿರುದ್ಧ ಬಜರಂಗದಳ ಹೋರಾಟ ನಡೆಸುತ್ತಲೇ ಬಂದಿದೆ. ದೌರ್ಜನ್ಯ ತಡೆಯಲು ಸರ್ಕಾರ ಕಾಯ್ದೆ ರೂಪಿಸಬೇಕು ಎಂದು ಒತ್ತಾಯಿಸಿದರು.
ವಿಎಚ್ಪಿ ಅಧ್ಯಕ್ಷ ಪ್ರವೀಣ್ ಪೂಜಾರಿ, ಜಿಲ್ಲಾ ಸಹ ಗೋರಕ್ಷ ಪ್ರಮುಖ್ ಅಜಿತ್, ನಗರ ಪ್ರಮುಖ್ ಮಧು, ಜಿಲ್ಲಾ ಸಹ ಪ್ರಮುಖ್ ಅಜಿತ್, ಪರೀಕ್ಷಿತ್ ಜಾವಳಿ ಇತರರಿದ್ದರು.
ಅಂತಾರಾಷ್ಟ್ರೀಯ ಪಿಡುಗು: ಲವ್ ಜಿಹಾದ್, ಮತಾಂತರ ತಡೆಗೆ ಕಾಯ್ದೆ ರೂಪಿಸುವ ಕಾರ್ಯಕ್ಕೆ ಧರ್ಮದ ಬಣ್ಣ ಹಚ್ಚುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು ಖಂಡಿಸಿದ್ದಾರೆ. ಲವ್ ಜಿಹಾದ್ ಅಂತಾರಾಷ್ಟ್ರೀಯ ಪಿಡುಗು. ಮದುವೆ ಹೆಸರಲ್ಲಿ ನಡೆಯುತ್ತಿರುವ ಮತಾಂತರ ತಡೆಗಟ್ಟಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಹೆಣ್ಣು ಮಕ್ಕಳ ಶೋಷಣೆಗೆ ಕಾರಣವಾಗಿರುವ ಲವ್ ಜಿಹಾದ್ ತಡೆಗಟ್ಟುವ ರಾಜ್ಯ ಸರ್ಕಾರ ಕಾನೂನು ಜಾರಿಗೆ ತರಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.