ನೆಲಮಂಗಲ: ಕುರುಬರ ಕಲ್ಯಾಣಕ್ಕಾಗಿ ಮತ್ತು ಜನಾಂಗವನ್ನು ಎಸ್ಟಿ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ 2021ರ ಜನವರಿ 15 ರಿಂದ ೆ.7 ರವರೆಗೆ ಕಾಗಿನೆಲೆಯಿಂದ ಬೆಂಗಳೂರಿಗೆ ಸುಮಾರು 340 ಕಿಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಾಗಿನೆಲೆ ಶ್ರೀಮದ್ ರೇವಣಸಿದ್ದೇಶ್ವರ ಮಹಾಸಂಸ್ಥಾನದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದರು.
ನಗರದ ಪರ್ವತಪ್ಪ ಬಡಾವಣೆ ಕನಕಸೌಧದಲ್ಲಿ ತಾಲೂಕು ಕುರುಬರ ಸಂಘ ಮತ್ತು ಕುರುಬ ಎಸ್ಟಿ ಹೋರಾಟ ಸಮಿತಿಯಿಂದ ರಾಜ್ಯಮಟ್ಟದ ಕುರುಬರ ಬೃಹತ್ ಸಮಾವೇಶದ ಪಾದಯಾತ್ರೆ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕುರುಬ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಕುರುಬ ಸಮುದಾಯಕ್ಕೆ ಎಸ್ಟಿ ಪಂಗಡದ ಮೀಸಲು ನೀಡುವಂತೆ ಒತ್ತಾಯಿಸಿ ಸಮುದಾಯದ 10 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಒಗ್ಗೂಡಿಸಿ ಬೆಂಗಳೂರು ಚಲೋ ಹೋರಾಟ ಯಶಸ್ವಿಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಕಾಗಿನೆಲೆಯಿಂದ ತಾಲೂಕಿಗೆ ಪಾದಯಾತ್ರೆ ಮೂಲಕ ಬರುವ ಸ್ವಾಮೀಜಿಗಳು, ಸಮುದಾಯದ ಜನರಿಗೆ ತಾಲೂಕು ಸಮಿತಿ ಸಕಲ ಸೌಲಭ್ಯ ಒದಗಿಸಬೇಕು. ಹೋರಾಟ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಸಮಾಜಕ್ಕೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ. ಕುರುಬ ಸಮುದಾಯದ ಕಲ್ಯಾಣಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ಕುರುಬರ ಸಂಘದ ತಾಲೂಕು ಅಧ್ಯಕ್ಷ ಚಿಕ್ಕನಾಗಯ್ಯ, ಉಪಾಧ್ಯಕ್ಷ ಬಿ.ಡಿ.ಗಂಗರಾಜು, ಪ್ರಧಾನ ಕಾರ್ಯದರ್ಶಿ ಕೆ.ನಾಗರಾಜು, ಖಜಾಂಚಿ ಸೂರ್ಯನಾರಾಯಣ್, ಕನಕ ಕೋ ಆಪರೇಟಿವ್ ಸೊಸೈಟಿ ಮಾಜಿ ನಿರ್ದೇಶಕ ನಾಗರಾಜು, ರಾಜ್ಯ ಪ್ರದೇಶ ಕುರುಬ ಸಂಘದ ನಿರ್ದೇಶಕ ಪರಮೇಶ್, ಕೃಷ್ಣಪ್ಪ, ಸಾವಯವ ಕೃಷಿ ಸಂಸ್ಥೆ ಮಾಜಿ ಅಧ್ಯಕ್ಷ ಸೋಮಶೇಖರ್ ವಿಎಸ್ಸೆಸ್ಸೆನ್ ಮಾದನಾಯಕನಹಳ್ಳಿ ಉಪಾಧ್ಯಕ್ಷ ಜಿ.ಡಿ.ಅರುಣ್ಕುಮಾರ್, ಮುಖಂಡ ಮಂಜುನಾಥ್, ಲೋಕೇಶ್, ಅನಂತು ಮತ್ತಿತರರು ಉಪಸ್ಥಿತರಿದ್ದರು.